Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Thursday, January 11, 2024

ಸ್ವಾಮಿ ವಿವೇಕಾನಂದರು - ರಾಷ್ಟ್ರೀಯ ಯುವ ದಿನ


 







"ಸ್ವಾಮಿ ವಿವೇಕಾನಂದರು - ರಾಷ್ಟ್ರೀಯ ಯುವದಿನ"

- ಉಷಾ ಗೊಬ್ಬೂರ


           ಅಮೇರಿಕದ ಒಬ್ಬ ಮಹಿಳೆ ಭಾರತೀಯ ಯುವಕನ ಮಾತು, ವ್ಯಕ್ತಿತ್ವಗಳಿಂದ ಆಕರ್ಷಿತರಾಗಿ ಆ ಯುವಕನ ಹತ್ತಿರ ಬಂದು ನನ್ನನ್ನು ನೀವು ಮದುವೆಯಾಗಬೇಕು ಎಂದು ನಿವೇದಿಸಿಕೊಂಡಳು. ಅವರು ಯಾಕೆ ತಾಯಿ ಎಂದು ಕೇಳಿದರು. ಆಗ ಆ ಮಹಿಳೆ “ನಿಮ್ಮಂತೆಯೇ ಜ್ಞಾನವಂತನಾದ ಮಗುವನ್ನು ಹೆತ್ತು ಈ ಜಗತ್ತಿಗೆ ಕೊಡುಗೆಯಾಗಿ ನೀಡಬೇಕು” ಎಂದಳು. ಇದಕ್ಕೆ ಆ ಯುವಕ “ನಾನೊಬ್ಬ ಸನ್ಯಾಸಿ, ನಿಮ್ಮನ್ನು ಮದುವೆಯಾಗಲು ಸಾಧ್ಯವಿಲ್ಲ. ನಿಮಗೆ ನನ್ನಂತಹ ಮಗು ಬೇಕೆಂಬ ಆಸೆ ಇದ್ದರೆ ನನ್ನನ್ನೇ ಮಗುವೆಂದು ತಿಳಿದುಕೊಳ್ಳಿ. ನಿಮ್ಮ ಆಸೆ ಈಡೇರಿದಂತಾಗುತ್ತದೆ ಅಂದರು. ಆ ಮಹಿಳೆ ತನ್ನ ಬಯಕೆಗೆ ಪಶ್ಚಾತ್ತಾಪ ಪಟ್ಟು ಯುವಕನ ಶಿಷ್ಯಳಾಗುತ್ತಾಳೆ‌. ಇಂತಹ ಮಹೋನ್ನತ ವ್ಯಕ್ತಿತ್ವವುಳ್ಳ ಮಹಾಪುರುಷನನ್ನು ನೀವೀಗಾಗಲೇ ಊಹಿಸಿರುತ್ತೀರಿ ಎಂದಾದ ಮೇಲೆ 'ಅವರು ಬೇರೆ ಯಾರೂ ಅಲ್ಲ' ಮಹಾನ್ ತತ್ವಜ್ಞಾನಿ, ದೇಶಭಕ್ತ, ಸಮಾಜ ಸುಧಾರಕ, ಭಾರತಾಂಬೆಯ ವರಪುತ್ರ, ಧೀಮಂತ ಸನ್ಯಾಸಿ ಸ್ವಾಮಿ ವಿವೇಕಾನಂದರು.

          ಸ್ವಾಮಿ ವಿವೇಕಾನಂದರು 1863, ಜನವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ ಹಾಗೂ ತಾಯಿ ಭುವನೇಶ್ವರಿ ದೇವಿ. ಇವರ ಬಾಲ್ಯದ ಹೆಸರು ನರೇಂದ್ರ. ನಂತರ ಸ್ವಾಮಿ ವಿವೇಕಾನಂದರೆನಿಸಿಕೊಂಡರು. ಬಾಲ್ಯದಲ್ಲಿ ನರೇಂದ್ರ ತುಂಟತನ, ಚತುರತೆ ಹಾಗೂ ಬುದ್ಧಿವಂತಿಕೆಗೆ ಹೆಸರಾಗಿದ್ದರು. ಭಿಕ್ಷುಕರು ಮನೆಗೆ ಬಂದರೆ ಮೈಮೇಲಿನ ಬಟ್ಟೆಯನ್ನೇ ಕೊಟ್ಟುಬಿಡುತ್ತಿದ್ದರು. ದುರ್ಬಲರ ಉದ್ಧಾರಕ್ಕಾಗಿ, ಬಡ ಜನರ ಸೇವೆಗಾಗಿ,ಮಹಿಳೆಯರ ಸಬಲೀಕರಣಕ್ಕಾಗಿ, ಯುವಕರಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದರು. 

        “ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ.” ಎಂಬ ಪ್ರಖರ ವಾಣಿಯ ಮೂಲಕ ಯುವಕರನ್ನು ಬಡಿದೆಬ್ಬಿಸಿ, ಅವರ ಮನೋಬಲವನ್ನು ಹೆಚ್ಚಿಸಿ, ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ ಮಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ಇವರ ಹೆಸರಿನಲ್ಲೇ ಒಂದು ಶಕ್ತಿ ಇದೆ. ಕೇವಲ ಹೆಸರು ಕೇಳಿದರೆ ಸಾಕು ದೇಹದಲ್ಲಿ ಮಿಂಚಿನ ಸಂಚಾರವಾಗುತ್ತದೆ. ಒಂದಿಡೀ ದೇಶವನ್ನೇ ಆವರಿಸಿಕೊಂಡು ಬದಲಾವಣೆಯ ಹೊಸ ಪರ್ವವನ್ನೇ ತರಬಲ್ಲ ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ಗಾಂದೀಜಿ, ಅಂಬೇಡ್ಕರ್ ಅವರಂಥ ಮಹಾನ್ ನಾಯಕರಲ್ಲಿ  ಸ್ವಾಮಿ ವಿವೇಕಾನಂದರು ಒಬ್ಬರು.

     “ಯುವಶಕ್ತಿಯಲ್ಲೇ ದೇಶದ ಭವಿಷ್ಯವಿದೆ” ಎಂಬುದನ್ನು ಮನಗಂಡು ಯುವಶಕ್ತಿಯನ್ನು ಇನ್ನಿಲ್ಲದಂತೆ ಎಚ್ಚರಿಸಿದವರು ವಿವೇಕಾನಂದರು.. ಭಾರತವು ಬಡತನ, ಅನಕ್ಷರತೆ, ಮೌಢ್ಯತೆ, ಪಾಶ್ಚಾತ್ಯರ ದಾಸ್ಯ, ಅಜ್ಞಾನದಂತಹ ಕೂಪಗಳಲ್ಲಿ ಬಿದ್ದು, ಒದ್ದಾಡುತ್ತಿರುವ ದಿನಗಳಲ್ಲಿ ಈ ಎಲ್ಲ ಋಣಾತ್ಮಕ ಪರಿಸ್ಥಿತಿಗಳ ಪರಿಹಾರಕ್ಕಾಗಿ ಯುವಪಡೆಯನ್ನು ಅಸ್ತ್ರವನ್ನಾಗಿ ಬದಲಿಸ ಹೊರಟರು. 

         ಭಾರತೀಯ ಸಮಾಜದ ಬದುಕನ್ನು ಅರ್ಥಪೂರ್ಣವಾಗಿ ತಿದ್ದಲು ದೃಢಸಂಕಲ್ಪ ಮಾಡಿದರು. ಧರ್ಮದ ಹೆಸರಿನಲ್ಲಿನ ಮೌಢ್ಯವನ್ನು ಖಂಡಿಸಿದರು. ”ಸದೃಢ ದೇಹದಲ್ಲಿ ಸದೃಢ ಮನಸ್ಸು” ನೆಲೆಗೊಂಡಿರುತ್ತದೆಂದು ಹೇಳಿ ಉತ್ತಮ ಶರೀರದ ಮಹತ್ವದ ಜೊತೆಗೆ ಧನಾತ್ಮಕ ಚಿಂತನೆ ಕೈಗೊಳ್ಳಲು ಪ್ರೇರೇಪಿಸಿದರು. “ದರಿದ್ರ ದೇವೋ ಭವ” ಅಂದರೆ ಬಡಜನರ ಸೇವೆಯನ್ನು ಮಾಡುವುದೆಂದರೆ, ನಿಜವಾಗಿ ನಾರಾಯಣನ ಸೇವೆ ಮಾಡಿದಂತೆ ಎಂದು ತಿಳಿಸಿಕೊಟ್ಟರು. ಯುವಕರಲ್ಲಿ ವೈಚಾರಿಕತೆ, ದೇಶಭಕ್ತಿ, ದೇಶಾಭಿಮಾನ ಮೂಡಿಸಿ, ಸುಂದರ ಬದುಕನ್ನು ಕಟ್ಟಿಕೊಳ್ಳಲು ಕರೆ ನೀಡಿದರು. ವಿವೇಕಾನಂದರು ಮೊದಲು ದೇಶದಾದ್ಯಂತ ಸಂಚರಿಸಿ, ದೇಶದ ಕಲ್ಯಾಣಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಿ, ಅಲ್ಲಿನ ಜನರಿಗೆ ಭಾರತದ ಜ್ಞಾನ, ಸಂಸ್ಕೃತಿಯನ್ನು ಪರಿಚಯಿಸಿ, ಭಾರತಕ್ಕೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಡಬೇಕೆಂಬುದು ಅವರ ಮಹದಾಸೆಯಾಗಿತ್ತು. ಅಂದುಕೊಂಡ ಸಮಯಕ್ಕೆ ಸರಿಯಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲೆಂದು ಅಮೇರಿಕಾಕ್ಕೆ ಹೊರಟರು. 

           1893 ಸಪ್ಟೆಂಬರ್ 11 ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು “ಅಮೇರಿಕಾದ ಸಹೋದರ, ಸಹೋದರಿಯರೇ” ಎಂದು ಆತ್ಮೀಯತೆಯಿಂದ ಸಂಬೋಧಿಸಿದರು. ಈ ಚಿಕ್ಕ ವಾಕ್ಯ ಕೇಳಿದೊಡನೆಯೇ ತುಂಬಿದ ಸಭೆ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರತಾಡನ ಮಾಡುವ ಮೂಲಕ ವ್ಯಕ್ತಪಡಿಸಿತು. ಪುಟ್ಟ ಭಾಷಣದ ಮೂಲಕ ಎಲ್ಲರ ಮನಸೂರೆಗೊಂಡು, ಭಾರತೀಯತೆಯ ಹಿರಿಮೆಯನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಯುರೋಪಿನ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ಹಿರಿಮೆಯನ್ನು ಎತ್ತರಿಸಿದರು.

        “ಆಶಿಷ್ಟರೂ, ಬಲಿಷ್ಟರೂ, ದೃಢಿಷ್ಟರೂ, ಮೇಧಾವಿಗಳೂ ಆದಂತಹ ಯುವಕರು ಮಾತ್ರ ಭಗವಂತನನ್ನು ಪಡೆಯಬಹುದು.” ಎಂದು ವೇದ ಸಾರುವುದು. ತಾರುಣ್ಯದ ಶಕ್ತಿ ಇರುವಾಗ ನಿಮ್ಮ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ. ಮುದುಕರಾಗಿ ಶಕ್ತಿ ಕುಗ್ಗಿದ ಮೇಲೆ ಅಲ್ಲ. ನವತಾರುಣ್ಯದ ಉತ್ಸಾಹದಲ್ಲಿ ಅದನ್ನು ನಿರ್ಧರಿಸಬೇಕಾಗಿದೆ. ಕೆಲಸ ಮಾಡಿ; ಈಗ ತಾನೇ ವಿಕಸಿತವಾದ, ಯಾರೂ ಮುಟ್ಟದ, ಮೂಸಿ ನೋಡದ ಹೂವುಗಳನ್ನು ಭಗವಂತನ ಅಡಿದಾವರೆಯಲ್ಲಿಡುವುದಕ್ಕೆ ಇದೇ ಸಮಯ. ದೇವರು ಇದನ್ನು ಮಾತ್ರ ಪರಿಗ್ರಹಿಸುವನು ಎಂದು ವಿವೇಕಾನಂದರು ಯುವಕರಿಗೆ  ಕರೆ ನೀಡಿದರು. ಅದರಂತೆ ಈ ಕೆಳಗಿನ ಸಂದೇಶಗಳನ್ನು ನೀಡಿದರು.

1. ”ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.”

2. ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಬಿಟ್ಟುಬಿಡುತ್ತೀರಿ.

3. ನೀವು ನಿಮ್ಮನ್ನು ನಂಬದ ಹೊರತು, ನಿಮ್ಮ ದೇವರನ್ನು ನಂಬಲು ಸಾಧ್ಯವಿಲ್ಲ.

4. ನಿಮಗೆ ಸಹಾಯ ಮಾಡುವ ಜನರನ್ನು ಎಂದಿಗೂ ಮರೆಯಬೇಡಿ. ನಿಮ್ಮನ್ನು ಪ್ರೀತಿಸುವವರನ್ನು ಎಂದಿಗೂ ದ್ವೇಷಿಸಬೇಡಿ. ನಿಮ್ಮನ್ನು ನಂಬಿದವರಿಗೆ ಎಂದಿಗೂ ಮೋಸ ಮಾಡಬೇಡಿ.

5. ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಗಮನ ಅಗತ್ಯ. ಧ್ಯಾನದ ಮೂಲಕ ನಾವು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು.

6. ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ. ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ.

7. ಯಾವ ವ್ಯಕ್ತಿಯು ಅಮರತ್ವವನ್ನು ಪಡೆದಿರುತ್ತಾನೋ ಅವನು ಯಾವುದೇ ಲೌಕಿಕ ವಸ್ತುಗಳಿಂದ ವಿಚಲಿತನಾಗುವುದಿಲ್ಲ.

8. ದೈಹಿಕವಾಗಿ, ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ, ಅದನ್ನು ವಿಷದಂತೆ ತಿರಸ್ಕರಿಸಿ.

9. ಯಾವಾಗಲೂ ನಾವು ಮಾತನಾಡುವ ಮುನ್ನ ಸರಿಯಾಗಿ ಯೋಚನೆ ಮಾಡಿ ಮಾತನಾಡಬೇಕು. ನಮ್ಮ ಆಲೋಚನೆಗಳು ಯಾವಾಗಲೂ ಜೀವಂತವಾಗಿರುತ್ತವೆ ಮತ್ತು ಪದಗಳು ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಸಂಚರಿಸುತ್ತಲೇ ಇರುತ್ತದೆ.

10. ಹೋರಾಟವು ದೊಡ್ಡದಾಗಿದ್ದರೆ, ವಿಜಯವು ಹೆಚ್ಚು ಅದ್ಭುತವಾಗಿರುತ್ತದೆ. ನೀವು ಸಮಸ್ಯೆಗಳನ್ನು ಎದುರಿಸದಿದ್ದರೆ ನೀವು ತಪ್ಪು ದಾರಿಯಲ್ಲಿದ್ದೀರಿ ಎನ್ನುವುದನ್ನು ಖಚಿತವಾಗಿ ಹೇಳಬಹುದು. ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.

11. ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂತಹ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.

12. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

13. ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

          ಯುವಕರು ರಾಷ್ಟ್ರದ ಅಮೂಲ್ಯ ಸಂಪತ್ತು ಮತ್ತು ಆ ದೇಶದ ಶಕ್ತಿ ಕೂಡ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಯುವಕರಲ್ಲಿ ಏನನ್ನೂ ಮಾಡಬಲ್ಲ ಶಕ್ತಿ ಇದೆ. ಇತಿಹಾಸದಲ್ಲಿ ಬಹುತೇಕ ಎಲ್ಲಾ ಕ್ರಾಂತಿಗಳು ಯುವಜನರಿಂದ ಪ್ರಾರಂಭವಾಗುತ್ತವೆ. ಯುವಕರು ಯಾವುದೇ ಸಮಾಜದ ನಿರ್ಮಾಣ ಘಟಕಗಳು. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಹೂಡಿಕೆಗಳಾಗಿವೆ. ಯೌವನವು ಜೀವನದಲ್ಲಿ ಕಲಿಯಬೇಕಾದ ಮತ್ತು ಜೀವನದಲ್ಲಿ ಪ್ರಯೋಗಿಸಬೇಕಾದ ಹಂತವಾಗಿದೆ. 

“My life, My rules” ಎಂಬುದು ಪ್ರಸ್ತುತ ಯುವ ಪೀಳಿಗೆಯ ಧ್ಯೇಯವಾಕ್ಯವಾಗಿದೆ. ಆದರೆ ಇಂದು ಕೆಲವು ಯುವಕರು ಈ ಕೆಳಗಿನ ಸಮಸ್ಯೆಗಳಿಂದ ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿಕೊಂಡಿದ್ದಾರೆ. 

1.  ಮಾದಕ ವ್ಯಸನ : ಯುವಕರು ಧೂಮಪಾನ, ಮಧ್ಯಪಾನ ಹಾಗೂ ಮಾದಕ ಪದಾರ್ಥಗಳ ದಾಸರಾಗಿದ್ದಾರೆ. ವಿನಯ, ವಿಧೇಯತೆ, ನಮ್ರತೆ ಯುವಕರಲ್ಲಿ ಮರೆಯಾಗುತ್ತಿವೆ. ಆಕ್ರಮಣಕಾರಿ ಸ್ವಭಾವದಿಂದ ಹೆತ್ತವರು ಹಾಗೂ ಸಮಾಜದ ಬಗೆಗಿನ ಕಾಳಜಿ ಕಣ್ಮರೆಯಾಗಿದೆ. ರಾಷ್ಟ್ರದ ಶಕ್ತಿಯಾಗಬೇಕಿದ್ದವರು, ದೌರ್ಬಲ್ಯವಾಗಿ ಹೊರ ಹೊಮ್ಮುತ್ತಿದ್ದಾರೆ.


2. ಡಿಜಿಟಲ್ ದಾಸ : ಸೋಶಿಯಲ್ ಮೀಡಿಯಾಗಳಾದ WhatsApp, Instagram, Facebook, YouTube,Twitter, Online gaming, reels, shorts, Internet, Web search, Cyber bulling, Cyber crime ಹೀಗೆ ಒಂದೇ ಎರಡೇ ಮೊಬೈಲ್ ಮಾಯೆಗೆ ಬಲಿಯಾಗಿ ಅಪಾಯಕಾರಿ ಘಟನೆಗಳಿಗೆ/ ಅನಾಹುತಗಳಿಗೆ ಆಹ್ವಾನ ನೀಡುತ್ತಿದ್ದಾರೆ.


3. ಬದಲಾದ ಜೀವನ ಶೈಲಿ : ಕೆಲಸದ ಒತ್ತಡ, ತಡರಾತ್ರಿ ಪಾರ್ಟಿ, ಮೋಜು-ಮಸ್ತಿ, Laptop ಬಳಕೆ, ಟಿ.ವ್ಹಿ. ಮನೋರಂಜನೆ ಇನ್ನಿತರೆ ಕಾರಣಗಳಿಂದ ತಡರಾತ್ರಿ ಮಲಗುವುದು ಇವೆಲ್ಲ ಪ್ರಕೃತಿಯ ವಿರುದ್ಧ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿವೆ.


4. ನೈತಿಕ ಮೌಲ್ಯಗಳ ಕೊರತೆ : ಉತ್ತಮ ಮೌಲ್ಯಗಳ ಕೊರತೆಯಿಂದಾಗಿ ಕುಟುಂಬ, ಸಮಾಜ, ದೇಶ ಹಾಗೂ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ದೇಶದ್ರೋಹಿ ಚಟುವಟಿಕೆಗಳು, ಭಯೋತ್ಪಾದನೆ, ಹೆಣ್ಣು ಮಕ್ಕಳ ಮೇಲೆ ಹಿಂಸೆ, ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರಗಳಂತಹ ಮೃಗೀಯ ಕೃತ್ಯಗಳನ್ನು ಎಸಗುತ್ತಿದ್ದಾರೆ.


5. ನಿರುದ್ಯೋಗ : “Empty mind is devil’s workshop.” ಎನ್ನುವರು. ನಿರುದ್ಯೋಗಿ ಯುವಕರು ಕೆಲಸವಿಲ್ಲದೆ, ಕಂಗಾಲಾಗಿ ಹಣಕ್ಕಾಗಿ ಕೆಟ್ಟ ಹಾದಿಗಳನ್ನು ಅನುಸರಿಸಿ ವಿಕೃತ ಮನಸ್ಸಿನವರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ.


6. ಮಾನಸಿಕ ಒತ್ತಡ : ಯುವ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಖಿನ್ನತೆ, ಆತಂಕ, ಆತ್ಮವಿಶ್ವಾಸದ ಕೊರತೆ, ಭಯ, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯ ಕೊರತೆ, ಕುಟುಂಬದ ಅತಿಯಾದ ನಿರೀಕ್ಷೆ ಈಡೇರಿಸುವಲ್ಲಿನ ಅಸಮರ್ಥತೆ, ಭದ್ರ ಭವಿಷ್ಯ ರೂಪಿಸಿಕೊಳ್ಳುವಲ್ಲಿನ ವೈಫಲ್ಯಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.


7. ಆತ್ಮಹತ್ಯೆ : ಇತ್ತೀಚಿನ ಯುವಕರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳೆ ಹಾಗೂ ಪುರುಷರು ಇಬ್ಬರಲ್ಲೂ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿದೆ.

ಈ ಎಲ್ಲ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿವೆ. ದೇಶದಲ್ಲಿ ಶಾಂತಿ ಹಾಗೂ ಸುಭದ್ರತೆಗೆ ಧಕ್ಕೆಯನ್ನುಂಟು ಮಾಡುತ್ತಿವೆ. 


ಸ್ವಾಮಿ ವಿವೇಕಾನಂದರು ಧೀಮಂತ ಸನ್ಯಾಸಿ, ಭಾರತಾಂಬೆಯ ವರಪುತ್ರ, ಸಮಾಜ ಸುಧಾರಕ, ಮಹಾಪುರುಷ ತಮ್ಮ 39ನೇ ವರ್ಷದ ಕಿರುವಯಸ್ಸಿನಲ್ಲಿಯೇ ಅಂದರೆ 1902ನೇ ಇಸವಿ ಜುಲೈ 4ರಂದು ವಿಧಿವಶರಾದರು. ಭೌತಿಕವಾಗಿ ಇಲ್ಲವಾದರೂ ಅವರ ಸಾಧನೆಗಳು ಹಾಗೂ ಸಂದೇಶಗಳು ಮಾತ್ರ ಅಜರಾಮರ. ಅವರ ಸಂದೇಶಗಳಿಂದ ಜೀವನದ ಅಭ್ಯುದಯಕ್ಕೆ ಎಲ್ಲವೂ ದೊರೆಯುತ್ತದೆ. ಅವರ ಚಿಂತನೆ ಹಾಗೂ ಸಂದೇಶಗಳು ಯುವಕರಿಗೆ ಪ್ರೇರಣೆ ನೀಡಿ ಅವರ ವ್ಯಕ್ತಿತ್ವ ವಿಕಸನಕ್ಕೆ ದಿವ್ಯ ಮಂತ್ರಗಳಾಗಿವೆ. ಹಾಗಾಗಿ ಅವರ ಸಂದೇಶಗಳು ಬರೀ ಬಾಯಿ ಮಾತುಗಳಾಗಿ ಉಳಿಯದೆ ಜೀವನದಲ್ಲಿ ಅಳವಡಿಸಿಕೊಂಡು ಆ ನಿಟ್ಟಿನಲ್ಲಿ ಯುವಕರ ಜೀವನ ಬದಲಾಗುವುದು ಅನಿವಾರ್ಯವಾಗಿದೆ. 1984 ರಿಂದಲೂ ಪ್ರತಿ ವರ್ಷ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ನಾವೆಲ್ಲ “ರಾಷ್ಟ್ರೀಯ ಯುವ ದಿನ” ಎಂದು ಆಚರಣೆ ಮಾಡುತ್ತಲೇ ಬರುತ್ತಿದ್ದೇವೆ. ಬರಿ ಆಚರಣೆ ಮಾಡಿದರೆ ಸಾಲದು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ.

ಯುವಕರೇ…….

ದೇಶಸೇವೆಯೆಂದರೆ, 

ಕೇವಲ ಕೈಯಲ್ಲಿ ಬಣ್ಣ ಬಣ್ಣದ ದೊಡ್ಡ ಧ್ವಜಗಳನ್ನು ಹೊತ್ತು ತಿರುಗುವುದೇ……???

ಜೋರಾಗಿ ಸದ್ದು ಮಾಡುತ್ತ ಬೇಕ್ ರ್ಯಾಲಿಗಳನ್ನು ಮಾಡುವುದೇ….??? 

ಜೋರಾಗಿ ಘೋಷಣೆಗಳನ್ನು ಕೂಗುತ್ತ ತಿರುಗುವುದೇ….??? 

ದೊಡ್ಡದಾಗಿ ಭಾಷಣ ಮಾಡುವುದೇ….???

ಸಭೆ- ಸಮಾರಂಭಗಳನ್ನು ಮಾಡುವುದೇ…..??? 

ಗಡಿಯಲ್ಲಿ ಗನ್ನು ಹಿಡಿದು ನಿಲ್ಲುವುದಷ್ಟೇ ದೇಶಸೇವೆಯಲ್ಲ.


ದೇಶವೆಂದರೆ ಇಲ್ಲಿನ ಜನ, ದೇಶವೆಂದರೆ ಇಲ್ಲಿನ ಸಮಾಜ, ದೇಶವೆಂದರೆ ನಿಮ್ಮೆಲ್ಲರ ಜೀವನ. ಮೊದಲು ಎಲ್ಲ ವಿಷಚಕ್ರಗಳಿಂದ ಹೊರಬಂದು ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ. ಇನ್ನೊಬ್ಬರ ಶ್ರಮವನ್ನು ಕಸಿದು ಜೀವಿಸುವುದನ್ನು ಬಿಟ್ಟು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ನಿಮ್ಮನ್ನು ಸಲುಹಿದ ಸಮುದಾಯಕ್ಕೆ ನೀವೊಂದು ಕೊಡುಗೆ ನೀಡುವಂತಾಗಬೇಕು. ಅಲ್ಲಿಂದಲೇ ಸಶಕ್ತ ಕುಟುಂಬ, ಸಮಾಜ ಹಾಗೂ ದೇಶ ನಿರ್ಮಾಣಗೊಳ್ಳುತ್ತದೆ ಅದುವೇ ನಿಜವಾದ ದೇಶ ಸೇವೆ.


ಯುವಕರೇ ಸಾಕಿನ್ನು ಕಗ್ಗತ್ತಲೆಯಿಂದ ಹೊರಬನ್ನಿ…….. ಎಚ್ಚೆತ್ತುಕೊಳ್ಳಿ…… ಜಾಗೃತರಾಗಿರಿ…..

ವಿಶಾಲ ಮನೋಭಾವವನ್ನು  ಬೆಳೆಸಿಕೊಳ್ಳಿ .

ಘಾತಕ ಕೃತ್ಯಗಳನ್ನು ದಿಕ್ಕರಿಸಿ.

ದೇಹ ಉಕ್ಕಿನಂತಿರಲಿ ಆದರೆ ಅದರಲ್ಲಿ ಪ್ರೀತಿ, ಕರುಣೆ, ಸಹಾನುಭೂತಿ, ದೇಶಾಭಿಮಾನ, ದೇಶಭಕ್ತಿ ನೆಲೆಸಿರಲಿ.

ನೈತಿಕ ಮೌಲ್ಯಗಳನ್ನು ಬೆಳೇಸಿಕೊಳ್ಳಿ.

ಸಮಾನತೆ, ವೈಚಾರಿಕತೆ, ಸಹೋದರತೆ ಹಾಗೂ ಸರ್ವ ಧರ್ಮ ಸಮಭಾವದ ಭಾರತ ಕಟ್ಟಲು ಸನ್ನದ್ಧರಾಗಿ.


ಯುವಕರೇ ನೀವು ಬೇರೆಯವರಿಗಾಗಿ ಅಲ್ಲ, ನಿಮಗೋಸ್ಕರ ಒಳ್ಳೆಯರಾಗುವ ಪಣ ತೊಡಿರಿ.


ಇದು ಬುದ್ಧನ ಭಾರತ….

ಬಸವಣ್ಣ, ಅಂಬೇಡ್ಕರರದ್ದು….

ಗಾಂಧೀಜಿ, ಫುಲೆಯವರದ್ದು….

ಸ್ವಾಮಿ ವಿವೇಕಾನಂದರ ಭಾರತ…..


ಇಂಥ ನೂರಾರು ಸಮಾಜ ಸುಧಾರಕರು, ನಿಜವಾದ ದೇಶೋದ್ಧಾರಕರ ಭಾರತದಲ್ಲಿ ನಾನು ಹುಟ್ಟಿದ್ದೇನೆಂಬುದೇ ನನಗೆ ಹೆಮ್ಮೆ.  ಅವರ ವಿಚಾರಗಳನ್ನು ಅನುಸರಿಸಲು ಪ್ರಯತ್ನಿಸೋಣ…… ಅವರ ತತ್ವಗಳನ್ನು ಕಿಂಚಿತ್ತಾದರೂ ಪಾಲಿಸೋಣ……


ಆಕರ ಗ್ರಂಥಗಳು : 

೧)ಸ್ವಾಮಿ ವಿವೇಕಾನಂದ ( ಕುವೆಂಪು)

೨) ವಿವೇಕಾನಂದ 

೩) ಅಂತರ್ಜಾಲ

No comments:

Post a Comment

ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS