Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Monday, August 5, 2024

ವಿಶ್ವ ಸ್ತನ್ಯಪಾನ ಸಪ್ತಾಹ

 


ಅಮೃತಪಾನ ಎದೆಹಾಲು


ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ

ನಾಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ |

ನೀ ಕೇಳಿದಾಗ ಕೊಡುವೇನು ||

ಈ ಜನಪದದ ಸಾಲುಗಳಲ್ಲಿ ಕಂದನ ಮೇಲಿರುವ ಅಮ್ಮನ ಅಗಾಧ ಪ್ರೀತಿ ಅಡಗಿದೆ. ಮಗುವಿನ ಜೀವನದಲ್ಲಿ ಬೇರೆ ಯಾರಿಂದಲೂ ತುಂಬಲಸಾಧ್ಯವಾದ ಸ್ಥಾನ ಎಂದರೆ, ಅದು ತಾಯಿಯದ್ದು. ವಿಶೇಷವಾದ ಭಾವನಾತ್ಮಕ ಬೆಸುಗೆ ತಾಯಿ ಮತ್ತು ಮಗುವಿನ ಮಧ್ಯೆ ಇರುತ್ತದೆ. ಕಾಣದ ಭ್ರೂಣದಿಂದ ಆರಂಭವಾಗುವ ಈ ಭಾಂದವ್ಯ ತಾಯಿಯಲ್ಲಿ ಮಗುವಿನ ಬಗೆಗೆ ಪ್ರೀತಿ, ಮಮತೆ, ವಾತ್ಸಲ್ಯ, ಕಾಳಜಿಗಳು ಭ್ರೂಣವು ಬೆಳದಂತೆ ಅದರ ಜೊತೆಗೇ ಬೆಳೆಯುತ್ತ ಹೋಗುತ್ತದೆ. ಶೈಶವಾವಸ್ಥೆಯಲ್ಲಿ ಮಗುವಿಗೆ ತಾಯಿಯ ಆರೈಕೆ ಅತ್ಯವಶ್ಯಕ.

ದಿನನಿತ್ಯದ ಕೆಲಸದ ಭರಾಟೆ, ಆಧುನಿಕ ಜೀವನ ಶೈಲಿ, ಸ್ತನ್ಯಪಾನದ ಬಗ್ಗೆ ಸೂಕ್ತ ಅರಿವಿಲ್ಲದಿರುವುದರಿಂದ ಮಗುವಿಗೆ ಸ್ತನ್ಯಪಾನದ ಕೊರತೆಯುಂಟಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ದೊಡ್ಡ ಸಮಸ್ಯೆಯಾಗಿದೆ.

“ಮಕ್ಕಳ ಹಕ್ಕುಗಳ ಸಮಾವೇಶ”ದ ಪ್ರಕಾರ ಪ್ರತಿ ಮಗುವಿಗೆ ಉತ್ತಮ ಪೋಷಣೆಯ ಹಕ್ಕಿದೆ. ಬಾಲ್ಯದಲ್ಲಿ ಅಪೌಷ್ಟಿಕತೆಯಿಂದಾಗುವ ಮಕ್ಕಳ ಸಾವುಗಳ ವರದಿಯಾಗುತ್ತಲೇ ಇವೆ. ಐದು ವರ್ಷದೊಳಗಿನ ಮಿಲಿಯನ್‌ಗಟ್ಟಲೆ ಮಕ್ಕಳ ಬೆಳವಣಿಗೆ ಕುಂಠಿತವಾಗಿ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. WHO ನ 20 ಡಿಸೆಂಬರ್ 2023ರ ವರದಿಯ ಪ್ರಕಾರ ಅಪೌಷ್ಟಿಕತೆಯಿಂದ ಜಾಗತಿಕವಾಗಿ ವರ್ಷಕ್ಕೆ 2.7 ಮಿಲಿಯನ್ ಮಕ್ಕಳ ಸಾವು ಸಂಭವಿಸುತ್ತಿದೆ ಎಂಬ ಅಂದಾಜಿದೆ. ಮಗುವಿನ ಮೊದಲ ಎರಡು ವರ್ಷಗಳು ಅತ್ಯಂತ ನಿರ್ಣಾಯಕವಾಗಿವೆ. ವಿಶೇಷವಾಗಿ ಮೊದಲ ಆರು ತಿಂಗಳುಗಳು ತಾಯಿಯ ಎದೆಹಾಲುಣಿಸುವಿಕೆ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ.

ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಬೇಕು. ಮಗುವಿನ ಮೊದಲ ಆರು ತಿಂಗಳುಗಳು ಯಾವುದೇ ಬಾಹ್ಯ ಆಹಾರ ನೀಡದೇ ಕೇವಲ ತಾಯಿಯ ಎದೆಹಾಲನ್ನು ಮಾತ್ರ ಕೊಡಬೇಕು. ಎರಡು ವರ್ಷಗಳು ಇಲ್ಲವೇ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಹಾಲುಣಿಸುವಿಕೆಯನ್ನು ಮುಂದುವರಿಸಬೇಕೆಂದು WHO ಹಾಗೂ UNICEF ಶಿಫಾರಸು ಮಾಡುತ್ತವೆ. ಅನೇಕ ಶಿಶುಗಳಿಗೆ ಮತ್ತು ಮಕ್ಕಳಿಗೆ ಸೂಕ್ತ ಆಹಾರ ದೊರಕುತ್ತಿಲ್ಲ. 2015 - 2020 ರ ಅವಧಿಯಲ್ಲಿ 0-6 ತಿಂಗಳ ವಯಸ್ಸಿನ ಸುಮಾರು 44%  ಶಿಶುಗಳು ಮಾತ್ರ ತಾಯಿಯ ಎದೆಹಾಲು ಸೇವಿಸಿದ್ದಾರೆಂದು ವರದಿಯಾಗಿದೆ.

ಇಂದಿಗೂ ನಮ್ಮ ದೇಶದ ಹಳ್ಳಿಗಳಲ್ಲಿ ಮಗು ಜನಿಸಿದ ನಂತರ….

ಹುಟ್ಟಿದ ಮಗುವಿಗೆ ಜೇನುತುಪ್ಪ ಕೊಡಲಾಗುತ್ತದೆ. 12 ತಿಂಗಳ ಒಳಗಿನ ಶಿಶುವಿಗೆ ಹಸುವಿನ ಹಾಲು ಕುಡಿಸಲಾಗುತ್ತದೆ. ಕೆಲವು ಹಣ್ಣಿನ ರಸಗಳನ್ನು ನೀಡಲಾಗುತ್ತದೆ. ಬಾದಾಮಿ ಒಣ ಖರ್ಜೂರವನ್ನು ತೇಯ್ದು ನೆಕ್ಕಿಸಲಾಗುತ್ತದೆ. ಸ್ವಲ್ಪ -ಸ್ವಲ್ಪ ನೀರು ಕೂಡ ಕುಡಿಸಲಾಗುತ್ತದೆ.

ಇವೆಲ್ಲವೂ ಶಿಶುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದರೊಂದಿಗೆ ಆರು ತಿಂಗಳ ಒಳಗೆ ನಮ್ಮ ಮಕ್ಕಳು ತಾಯಿಯ ಎದೆಹಾಲು ಉಣಿಸುವಿಕೆಯಿಂದ ವಂಚಿತರಾಗುತ್ತಿರುವುದಕ್ಕೂ ಕೆಲವು ಕಾರಣಗಳಿವೆ.

ತಾಯಿಯ ಆಧುನಿಕ ಜೀವನ ಶೈಲಿ. ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವ ಮಹಿಳೆಯರು. ಕೆಲಸದ ಒತ್ತಡಗಳಲ್ಲಿ ಮಗುವಿನ ಬಗ್ಗೆ ಸೂಕ್ತ ಕಾಳಜಿವಹಿಸಲು ಅವಕಾಶ ದೊರೆಯದೆ ಇರುವುದು. ಕೆಲವು ಮಹಿಳೆಯರಲ್ಲಿರುವ ಅತಿಯಾದ ಸೌಂದರ್ಯ ಪ್ರಜ್ಞೆ. ಆಧುನಿಕ ಆಹಾರ ಪದ್ಧತಿ ಹಾಗೂ ಜಂಕ್ ಫುಡ್ಗಳ ಸೇವನೆಯಿಂದ ಎದೆಹಾಲಿನ ಕೊರತೆ. ಪ್ರಸವ ಸಂದರ್ಭದಲ್ಲಿನ ತಾಯಿಯ ಮರಣ. ಶಸ್ತ್ರಚಿಕಿತ್ಸೆಯಿಂದ ಹಾಗೂ ಕಡಿಮೆ ತೂಕ ಹೊಂದಿರುವ ಶಿಶುಗಳ ವೆಂಟಿಲೇಟರ್‌ನಲ್ಲಿ ಆರೈಕೆ ಮಾಡುವುದು. ಎದೆಹಾಲು ಹೆಚ್ಚಿಸುವ ಆಹಾರ ಸೇವಿಸುವುದರ ಕುರಿತಾದ ತಿಳುವಳಿಕೆಯ ಕೊರತೆ. ಸಾರ್ವಜನಿಕ ಸ್ಥಳಗಳಲ್ಲಿ ಎದೆ ಹಾಲುಣಿಸಲು ಸೂಕ್ತ ಸ್ಥಳಾವಕಾಶ ಇಲ್ಲದಿರುವುದು.

ತಾಯಿಯ ಎದೆಹಾಲು, ಶಿಶುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಇದು ತಾಯಿ ಮತ್ತು ಮಗುವಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುವ ನೈಸರ್ಗಿಕವಾದ ಅಗತ್ಯ ಕ್ರಿಯೆಯಾಗಿದೆ.

ಸ್ತನ್ಯಪಾನದಿಂದ ಮಗುವಿಗೆ ಆಗುವ ಪ್ರಯೋಜನಗಳು.

ಎದೆಹಾಲು ಶಿಶುಗಳಿಗೆ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು, ಖನಿಜಗಳು ಹಾಗೂ ಪ್ರೋಟೀನ್ ಗಳನ್ನು ಒದಗಿಸುತ್ತದೆ. ರೋಗಗಳಿಂದ ರಕ್ಷಣೆ ಹಾಗೂ ಪ್ರತಿರಕ್ಷಣಾ ಕ್ಷಮತೆಯನ್ನು ಹೆಚ್ಚಿಸುತ್ತದೆ. ಮೆದುಳಿನ ಬೆಳವಣಿಗೆ ಹಾಗೂ ಸ್ಮರಣ ಶಕ್ತಿ ಸುಧಾರಿಸಲು ಸಹಾಯಕವಾಗುತ್ತದೆ. ಚರ್ಮದಿಂದ ಚರ್ಮದ ಸಂಪರ್ಕ ಮತ್ತು ಹಾಲುಣಿಸುವ ದೈಹಿಕ ನಿಕಟತೆಯಿಂದ ತಾಯಿ ಮತ್ತು ಮಗುವಿನ ಬಂಧವನ್ನು ಉತ್ತೇಜಿಸುತ್ತದೆ. ಅತಿಸಾರ, ನ್ಯೂಮೋನಿಯ, ಕಿವಿ ಸೋಂಕು, ಹಿಮೋಫಿಲಸ್, ಇನ್ ಫ್ಲೋಯೆಂಜಾ ಮತ್ತು ತೀವ್ರವಾದ ಸೋಂಕಿನಿಂದ ರಕ್ಷಿಸುತ್ತದೆ. ಬುದ್ಧಿಮತ್ತೆ ಚುರುಕಾಗುತ್ತದೆ. ಹೆಚ್ಚಿನ ತೂಕ,  ಬೊಜ್ಜಿನ  ನಿಯಂತ್ರಣ ಹಾಗೂ ವಯಸ್ಕ ಜೀವನದಲ್ಲಿ ಮಧುಮೇಹ ಉಂಟಾಗುವ ಸಾಧ್ಯತೆ ಕಡಿಮೆ ಮಾಡುತ್ತದೆ.

ಸ್ತನ್ಯಪಾನದಿಂದ ತಾಯಿಗೆ ಆಗುವ ಪ್ರಯೋಜನಗಳು.

ಸ್ತನ್ಯಪಾನವು ಪ್ರಸವ ನಂತರದ ತೂಕ ನಷ್ಟಕ್ಕೆ ಸಹಾಯಮಾಡುತ್ತದೆ.ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಗರ್ಭಾಶಯವು ಅದರ ಪೂರ್ವ ಗರ್ಭಧಾರಣೆಯ ಗಾತ್ರಕ್ಕೆ ಮರಳಲು ಸಹಾಯ ಮಾಡುತ್ತದೆ. ಎದೆಹಾಲು ಯಾವಾಗಲೂ ಲಭ್ಯವಿರುತ್ತದೆ ಮತ್ತು ಸರಿಯಾದ ತಾಪಮಾನದಲ್ಲಿರುತ್ತದೆ.  ಸ್ತನ್ಯಪಾನ ಜನನ ನಿಯಂತ್ರಣದ ನೈಸರ್ಗಿಕ ವಿಧಾನವಾಗಿದೆ. ಭಾವನಾತ್ಮಕ ಒತ್ತಡವನ್ನು ನಿವಾರಿಸುತ್ತದೆ. 

  ಇನ್ನೂ ಅನೇಕ ಪ್ರಯೋಜನಗಳು ಸ್ತನ್ಯಪಾನದಿಂದ ತಾಯಿ ಹಾಗೂ ಮಗುವಿಗೆ ಉಂಟಾಗುತ್ತವೆ.

ಯಶಸ್ವಿ ಸ್ತನ್ಯಪಾನಕ್ಕೆ ಇರುವಂತಹ ಪ್ರಮುಖ ಅಂಶಗಳು.

ಹುಟ್ಟಿದ ತಕ್ಷಣ ಮೊದಲ ಗಂಟೆಯೊಳಗೆ ತನ್ನಪಾನವನ್ನು ಪ್ರಾರಂಭಿಸುವುದು. ಮಗು ಬಯಸಿದಷ್ಟು ಹಗಲು ರಾತ್ರಿ ಬೇಡಿಕೆ ಮೇರೆಗೆ ಸ್ತನ್ಯಪಾನ ಮಾಡಿಸುವುದು. ತಾಯಿ ಮತ್ತು ಶಿಶು ಸತತ ಒಟ್ಟಿಗೆ ಇರಲು ಅನುವು ಮಾಡಿಕೊಡುವುದು.  ವೈದ್ಯಕೀಯ ಶಿಫಾರಸ್ಸಿನ ಹೊರತು ಶಿಶುಗಳಿಗೆ ಹೆಚ್ಚುವರಿ ಆಹಾರ, ಪಾನೀಯ ಇಲ್ಲವೇ ನೀರು ಕೊಡದಿರುವುದು.

ದರ ಮಹತ್ವವನ್ನು ಅರಿತು ಸ್ತನ್ಯಪಾನವನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಸರ್ಕಾರದ ನೀತಿ  ನಿರೂಪಕರು, WHO, UNICEF ಹಾಗೂ ಇತರೆ ಸಂಸ್ಥೆಗಳು ಶ್ರಮಿಸುತ್ತಿವೆ. ಪ್ರಪಂಚದಾದ್ಯಂತ ಶಿಶುಗಳ ಆರೋಗ್ಯವನ್ನು ಸುಧಾರಿಸಲು ವಾರ್ಷಿಕವಾಗಿ ಆಗಸ್ಟ್ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ವಾರವನ್ನು ಆಚರಿಸಲಾಗುತ್ತದೆ. ಪ್ರಸ್ತುತ 170ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. ಇದರಲ್ಲಿ ನಮ್ಮೆಲ್ಲರ ಪಾತ್ರ ಕೂಡ ಮಹತ್ವದ್ದು.

ಬ್ಯಾಕ್ಟೀರಿಯಮ್ ಅಥವಾ ಎದೆಹಾಲು ಬ್ಯಾಂಕ್ ನಲ್ಲಿ ಮಾನವ ಹಾಲನ್ನು ಸಂಗ್ರಹಿಸಲಾಗುತ್ತದೆ. ಹಾಲನ್ನು ಕೆಡದಂತೆ ಪ್ರಕ್ರಿಯೆಗೊಳಿಸಿ, ಪಾಶ್ಚರೀಕರಿಸಿ, ವಿತರಿಸುವ ಸೇವೆಯನ್ನು ಈ ಎದೆಹಾಲು ಬ್ಯಾಂಕ್ ಮೂಲಕ ಮಾಡಲಾಗುತ್ತದೆ. ತಾಯಿಯ ಹೊರತಾಗಿ ಬೇರೆ ಮಹಿಳೆಯಿಂದ ಸರಬರಾಜು ಮಾಡಲ್ಪಟ್ಟ ಎದೆಹಾಲು ಬಳಸುವುದರಿಂದ ದಾನಿ ತಾಯಿಯಿಂದ ಮಗುವಿಗೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಹರಡದಂತೆ ಕಾಳಜಿ ವಹಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾನವ ಹಾಲಿನ ಬ್ಯಾಂಕುಗಳ ಬೇಡಿಕೆ ಮತ್ತು ಬಳಕೆ ಹೆಚ್ಚುತ್ತಿದೆ.

ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಮಾನವ ಹಾಲಿನ ಬ್ಯಾಂಕುಗಳು ಸ್ಥಾಪಿತಗೊಂಡಿವೆ. 1985 ರಲ್ಲಿ ಮೊದಲ ಹಾಲಿನ ಬ್ಯಾಂಕ್ ಸ್ಥಾಪಿತವಾಯಿತು. ಏಷ್ಯಾದ ಮೊದಲ ಹಾಲಿನ ಬ್ಯಾಂಕನ್ನು 1989ರಲ್ಲಿ ಭಾರತದ ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಯಿತು. ಹಾಲಿನ ಕೊರತೆ ಅನುಭವಿಸುತ್ತಿರುವ ತಾಯಂದಿರು ಇಂತಹ ಬ್ಯಾಂಕುಗಳ ಮೂಲಕ ದಾನಿ ತಾಯಂದಿರ ಹಾಲನ್ನು ತಮ್ಮ ಮಗುವಿಗಾಗಿ ಪಡೆಯುತ್ತಿದ್ದಾರೆ. ಇದರಿಂದ ಹಾಲಿನ ಕೊರತೆಯುಂಟಾಗಿ, ಅಪೌಷ್ಟಿಕತೆಯಿಂದ ಸಂಭವಿಸುವ ಶಿಶುಗಳ ಸಾವಿನ ಪ್ರಮಾಣ ಕಡಿಮೆಯಾಗಿದೆ.

ಜುಲೈ 30, 2024 ರಂದು ವೈನಾಡ್ ಭೂಕುಸಿತ ದುರಂತ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಎದೆ ಹಾಲು ಬೇಕಿದ್ದರೆ ತಿಳಿಸಿ, ನನ್ನ ಪತ್ನಿ ಸಿದ್ದಳಿದ್ದಾಳೆ. ಎಂಬ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಇಂತಹ ವಿಭಿನ್ನವಾದ ಮಾನವೀಯತೆ ಮೆರೆಯುವ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದ್ದು ಇದೇ ಮೊದಲೇನಲ್ಲ. ಈ ಸಂದೇಶವನ್ನು ಮಲಯಾಳಂನಲ್ಲಿ ಕಳುಹಿಸಲಾಗಿದ್ದು ಕಳುಹಿಸಿದ ವ್ಯಕ್ತಿಯ ವಿವರ ಎಲ್ಲೂ ಲಭ್ಯವಾಗಿಲ್ಲ ಆದರೂ ಆ ವ್ಯಕ್ತಿ ಹಾಗೂ ಆತನ ಪತ್ನಿ ಸಂದೇಶ ಹಲವಾರು ಮಂದಿಯ ಹೃದಯ ತಲುಪಿದ್ದಂತೂ ನಿಜ.

ಆರೋಗ್ಯವಂತ ಮಕ್ಕಳು ನಮ್ಮ ದೇಶದ ಸಂಪತ್ತು. ಇಂತಹ ಮಕ್ಕಳಿಂದ ಎಲ್ಲಾ ರೀತಿಯ ಪ್ರಗತಿ ನಿರೀಕ್ಷಿಸಲು ಸಾಧ್ಯ. ಉತ್ತಮ ಸಮಾಜ, ದೇಶ ಹಾಗೂ ವಿಶ್ವಕ್ಕಾಗಿ ಸ್ತನ್ಯಪಾನವನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಪ್ರತಿಯೊಬ್ಬರು ಕಾಳಜಿ ವಹಿಸಲೇಬೇಕು.

ಉಷಾ ಗೊಬ್ಬೂರ

ಕಲಬುರಗಿ

Monday, July 15, 2024

ಚಿಂಕಿ-ಮಿಂಕಿ

 ಚಿಂಕಿ - ಮಿಂಕಿ


ಅಮ್ಮ ಚಿಂಕಿ - ಮಿಂಕಿ ಇಬ್ಬರನ್ನು ದಿನಾಲು ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಎಬ್ಬಿಸಿ ಶಾಲೆಗೆ ಹೋಗಲು ರೆಡಿ ಮಾಡುತ್ತಿದ್ದರು‌. 9 ಗಂಟೆಗೆ ಸರಿಯಾಗಿ ಹಾನ್೯ ಸದ್ದು ಮಾಡುತ್ತ ಮನೆ ಬಾಗಿಲಿಗೆ ಶಾಲೆಯ ವ್ಯಾನ್ ಬಂದು ಅವರಿಬ್ಬರನ್ನು ಕರೆದೊಯ್ಯುತ್ತಿತ್ತು. ಶಾಲೆಯಲ್ಲಿ ಮಿಸ್ ಹೇಳಿಕೊಡುವ ಆಟ - ಪಾಠದ ನಂತರ ಮಣಭಾರದ ಬ್ಯಾಗ ಹೊತ್ತು ಚಿಂಕಿ-ಮಿಂಕಿಯರನ್ನು ಸಂಜೆ ಹೊತ್ತಿಗೆ ವ್ಯಾನ್ ಮತ್ತೆ ಮನೆ ಬಾಗಿಲಿಗೆ ತಂದುಬಿಡುತ್ತಿತ್ತು. ಮನೆಗೆ ಮರಳಿದ ನಂತರ ಕೈ-ಕಾಲು-ಮುಖ ತೊಳೆದು ಅಮ್ಮ ಕೊಡುವ ತಿಂಡಿ ತಿಂದು ಶಾಲೆಯಲ್ಲಿ ಮಿಸ್ ಕೊಟ್ಟ ಹೋಮ್ ವರ್ಕ್ ಮಾಡುತ್ತಾ ಕೂಡುತ್ತಿದ್ದರು. ಬೇಜಾರಾದಾಗ ಮನೆಯ ದೊಡ್ಡದಾದ ಕಿಟಕಿಯಿಂದ ಹೊರಗಡೆ ರಸ್ತೆಯ ಮೇಲೆ ಕೆಲವು ಮಕ್ಕಳು ಆಡುತ್ತಿರುವುದನ್ನು ನೋಡುತ್ತ ನಿಲ್ಲುತ್ತಿದ್ದರು. ಸ್ವಲ್ಪ ಬಿಡುವಿನ ಸಮಯ ಸಿಕ್ಕರೆ ಸಾಕು, ಮೊಬೈಲ್ ನಲ್ಲಿ ಮುಳುಗುತ್ತಿದ್ದರು. ಹೀಗೆ ಅವರಿಬ್ಬರದ್ದು ಯಾಂತ್ರಿಕ ಜೀವನವಾಗಿಬಿಟ್ಟಿತ್ತು. ಬಹಳ ದಿನಗಳ ನಂತರ ಹಾಗೋ - ಹೀಗೋ ಬಿಡುವು ಮಾಡಿಕೊಂಡ ಚಿಂಕಿ-ಮಿಂಕಿಯ ಅಪ್ಪ ಅಮ್ಮ ಅವರಿಬ್ಬರನ್ನು ಕರೆದುಕೊಂಡು ಹಳ್ಳಿಗೆ ಹೊರಟರು. ದಾರಿಯುದ್ದಕ್ಕೂ ಚಿಂಕಿ-ಮಿಂಕಿ ಸುಮ್ಮನಿರದೆ ಪ್ರಶ್ನೆಗಳ ಸುರಿಮಳೆಗೈದರು. ಹಳ್ಳಿಯಲ್ಲಿ ಸುಂದರ ತೋಟವಿದ್ದು, ಅಲ್ಲಿಗೆ ಹೋಗೋಣ ಎಂದು ಅಪ್ಪ ಹೇಳಿದರು. 


ಮರುದಿನ ಚಿಂಕಿ-ಮಿಂಕಿ, ಅಪ್ಪ-ಅಮ್ಮರೊಡನೆ ತೋಟಕ್ಕೆ ಹೋದರು. ತೋಟದ ತುಂಬೆಲ್ಲ ಸಂತಸದಿಂದ ಓಡಾಡತೊಡಗಿದರು. ಆದರೆ ಅಲ್ಲಿ ಅವರು ಮಂಕಾದ ಹೂ-ಹಣ್ಣಿನ ಗಿಡಗಳು, ಹೊಂಡದಲ್ಲಿನ ಮೀನುಗಳನ್ನು ನಿಸ್ತೇಜ ಚಿಟ್ಟೆಗಳನ್ನು, ಅಳುವ ಮೋಡಗಳನ್ನು ಕಂಡರು. ಇದೆಲ್ಲವು ಅವರ ಉತ್ಸಾಹವನ್ನೇ ಕಸಿದುಕೊಂಡಂತಾಯಿತು. ಚಿಂಕಿಯು ಮೆಲ್ಲನೆ ಮಂಕಾದ ಮಾವಿನ ಮರದ ಹತ್ತಿರ ಹೋಗಿ “ಯಾಕೆ ಮರವೇ ಏನಾಯ್ತು?” ಎಂದು ಕೇಳಿದಳು.


ಮಾವಿನ ಮರ:  ಮತ್ತಿನ್ನೇನು ಚಿಂಕಿ…. ಮೊದಲೆಲ್ಲ ಚಿಕ್ಕ ಮಕ್ಕಳು ನಿಮ್ಮ ಅಜ್ಜನ (ತೋಟದ ಮಾಲೀಕ) ಕಣ್ಣು ತಪ್ಪಿಸಿ ನನ್ನ ಮೇಲೆ ಏರಿ ಮಾವಿನ ಹಣ್ಣುಗಳನ್ನು ಕಿತ್ತು ತಿಂದು ಖುಷಿ ಪಡುತ್ತಿದ್ದರು. ಅವರಿಲ್ಲದೆ ನಾನೀಗ ಒಂಟಿಯಾಗಿರುವೆ. 


ಚಿಂಕಿ: “ಈಗ ಯಾಕೆ ಅವರು ಬರುತ್ತಿಲ್ಲ?” 


ಮಾವಿನ ಮರ: ಅವಳು ಬಂದಿದ್ದಾಳಲ್ಲ ಮಾಯಗಾತಿ ಮೊಬೈಲ್ ಎಲ್ಲರೂ ಅವಳ ಜೊತೇನೆ ಆಟ ಆಡ್ತಾರೆ.


ಮಿಂಕಿ: (ಹೂವಿನ ಗಿಡಗಳಿಗೆ) “ಯಾಕೆ ಈ ಹೂಗಳು ಇಷ್ಟು ಬೇಗ ಮುದುಡಿಕೊಂಡಿವೆ?”


ಹೂವಿನ ಗಿಡಗಳು : ಮಿಂಕಿ ಮೊದಲೆಲ್ಲ ಮಕ್ಕಳು ನನ್ನಲ್ಲಿರುವ ಹೂಗಳ ಅಂದ-ಚಂದ, ಬಣ್ಣ, ಸುವಾಸನೆ ಇವೆಲ್ಲವುಗಳಿಗೆ ಮಾರು ಹೋಗಿ  ಹೂಗಳನ್ನು ತಲೆಯಲ್ಲಿ ಮುಡಿದು, ಕೈಯಲ್ಲಿ ಹಿಡಿದು ಪ್ರೀತಿಸುತ್ತಿದ್ದರು. ಆದರೆ ಈಗ ಆ ಮಕ್ಕಳು ಬರುತ್ತಿಲ್ಲ ಅವರ ಕಲರವವೂ ಕೇಳದಂತಾಗಿದೆ.


ಮನಸ್ಸಿನಲ್ಲಿಯೇ ಮಿಂಕಿ ಕಳವಳಗೊಂಡು ಮುಂದೆ ಸಾಗಿದಳು ಅಲ್ಲಿ ಚಿಟ್ಟೆಗಳನ್ನು ಕಂಡಳು.


ಮಿಂಕಿ : “ಚಿಟ್ಟೆಗಳೆ…. ಚಿಟ್ಟೆಗಳೆ…. ಯಾಕೆ ಹೀಗೆ ಸುಮ್ಮನೆ ಕುಳಿತಿದ್ದೀರಿ? ಹಾರಾಡುತ್ತಿಲ್ಲವೇಕೆ?”


ಚಿಟ್ಟೆ : ನಾವು ಮಕರಂದ ಹೀರಲು ಹೂವಿಂದ ಹೂವಿಗೆ ಹಾರಾಡುತ್ತಿದ್ದರೆ ಮಕ್ಕಳೆಲ್ಲ ನನ್ನ ಹಿಂದೆ-ಹಿಂದೆ ಓಡೋಡಿ ಹಿಡಿಯಲು ಬರುತ್ತಿದ್ದರು. ನಾನಾಗ ತಪ್ಪಿಸಿಕೊಂಡು ಹಾರುತಿದ್ದೆ. ಆದರೆ ಅವರೆಲ್ಲ ಈಗ ಯೂಟ್ಯೂಬ್ ನಲ್ಲಿನ ಹಾಡು ಕೇಳುತ್ತಾ, 


ಬಟರ್ ಫ್ಲೈ …ಬಟರ್ ಫ್ಲೈ….

ವೇರ್ ಆರ್ ಯು ಗೋಯಿಂಗ್ ?  

ಔಟ್ ಇನ್ ದ ಗಾರ್ಡನ್ ಡ್ಯಾನ್ಸಿಂಗ್ ಡಾನ್ಸಿಂಗ್, 

ಪ್ರೆಟಿ… ಪ್ರೆಟಿ… ಬಟರ್ ಫ್ಲೈ, 

ಲವ್ಲಿ… ಲವ್ಲಿ… ಬಟರ್ ಫ್ಲೈ 


ಎನ್ನುತ್ತಾ ಅಲ್ಲೇ ಕುಣಿಯುತ್ತಾರೆ ಹೊರತು ನನ್ನನ್ನು ಹಿಡಿಯಲು ಓಡಿ ಬರುವುದಿಲ್ಲ.


ಚಿಂಕಿ : “ಬೇಜಾರಾಗಬೇಡ ಚಿಟ್ಟೆ ಇನ್ನು ಮುಂದೆ ನಾವೆಲ್ಲ ಆಗಾಗ ಬಿಡುವಿದ್ದಾಗೆಲ್ಲ ನಿನ್ನ ಹತ್ತಿರ ಬರುತ್ತೇವೆ.”


ಚಿಂಕಿ - ಮಿಂಕಿ ಇಬ್ಬರು ಅಲ್ಲಿಯೇ ಇದ್ದ ನೀರಿನ ಹೊಂಡದ ಬಳಿ ಹೋದರು. ಅದರಲ್ಲಿರುವ ಮೀನುಗಳಿಗೆ ಬಿಸ್ಕಟ್ ಹಾಕಿದರು. ಆದರೆ ಮೀನುಗಳು ಮಾತ್ರ ತಿನ್ನದೆ ದೂರ ಹೋಗತೊಡಗಿದವು.


ಮಿಂಕಿ : “ನಿಲ್ಲಿ …. ನಿಲ್ಲಿ…. ಮೀನುಗಳೇ ಬಿಸ್ಕೆಟ್ ತಿನ್ನಿ ಯಾಕೆ ತಿನ್ನುತ್ತಿಲ್ಲ ನೀವೆಲ್ಲ?”


ಮೀನು : ಮಕ್ಕಳೇ ನೀವೆಲ್ಲ ನನ್ನ ಹತ್ತಿರ ಬಂದು ನೀರಲ್ಲಿ ಆಟವಾಡುತ್ತಿದ್ದರೆ ಅದನ್ನು ಕಂಡು ನಾನು ತುಂಬಾ ಖುಷಿ ಪಡುತ್ತಿದ್ದೆ. ಇತ್ತೀಚೆಗೆ ನೀವೆಲ್ಲ ಬರುವುದನ್ನೇ ನಿಲ್ಲಿಸಿದ್ದೀರಿ “ಮಛಲಿ ಜಲ್ ಕೀ ರಾನಿ ಹೈ” ಅನ್ನೋದು ನೀವು ಮರೆತಿರುವಿರಿ.


ಮೋಡಗಳು : ಹೌದು ನಂಗೂ ಹಾಗೆ ಅನಿಸುತ್ತದೆ. ನನ್ನನ್ನು ನೋಡಿ ಮಕ್ಕಳೆಲ್ಲ ಬೆಳ್ಳಿ ಮೋಡ, ಹತ್ತಿಯರಾಶಿ, ಕುದುರೆ, ಆನೆ, ತೊಟ್ಟಿಲು ಎಂದೆಲ್ಲ ವರ್ಣಿಸಿ ಹಾಡಿ ಹೊಗಳುತ್ತಿದ್ದರು. ಇತ್ತೀಚೆಗೆ ಆ ವರ್ಣನೆ ಕೇಳದೆ ನನ್ನ ಕಿವಿಗಳು ಕಿವುಡಾಗಿ ಹೋಗಿವೆ. ಈ ಮೊಬೈಲ್ ಹಾಗೂ ಟಿವಿಗಳು ಬಂದಮೇಲೆ ಮಕ್ಕಳೆಲ್ಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಅವರ ನಗು, ಆಟ, ಕೂಗಾಟ, ಚೀರಾಟ ಇವೆಲ್ಲವೂ ಕೇಳದಂತಾಗಿದೆ.


ಚಿಂಕಿ-ಮಿಂಕಿ ಮಾವಿನ ಮರ, ಹೂವಿನ ಗಿಡಗಳು, ಚಿಟ್ಟೆ, ಮೀನು, ಮೋಡಗಳ ಮಾತುಗಳನ್ನು ಕೇಳಿ ನಿಜಾಂಶವನ್ನು ಅರಿತು ಮಕ್ಕಳಾದ ನಾವೆಲ್ಲ ಮೊಬೈಲ್ ಹಾಗೂ ಟಿವಿ ಗೀಳಿಗೆ ಬಿದ್ದು ನಮ್ಮ ಸುಂದರ ಬಾಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಅದೇ ರೀತಿ ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಿಸರ್ಗದೊಂದಿಗಿನ ಒಡನಾಟದ ಮಹತ್ವ ಮರೆತು ಪಂಜರದ ಗಿಳಿಯಾಗಿದ್ದೇವೆ ಎನ್ನುತ್ತಾ ಮಕ್ಕಳೆಲ್ಲ ಬಿಡುವಿನ ಸಮಯದಲ್ಲಿ ಹೊರ ಪ್ರಪಂಚ ಹಾಗೂ ನಿಸರ್ಗದೊಂದಿಗೆ ಬೆರೆಯಬೇಕು, ಇನ್ನು ಮುಂದೆ ನಾವೆಲ್ಲ ಹಾಗೆ ಮಾಡೋಣ ಎನ್ನುತ್ತಾ ಎಲ್ಲರಿಗೂ ಬಾಯ್ ಹೇಳಿ ಮನೆ ಕಡೆ ಹೊರಟರು.


ಉಷಾ ಗೊಬ್ಬೂರ

15/07/2024

Wednesday, June 5, 2024

ಪ್ರತಿದಿನ ಪರಿಸರ ದಿನವಾಗಲಿ


ಉತ್ತರ ಪ್ರದೇಶ: ತಾಪಮಾನ ಏರಿಕೆ, ಕೊನೆ ಹಂತದ ಚುನಾವಣೆ ದಿನ 33 ಸಿಬ್ಬಂದಿ ಸಾವು.


ಅಷ್ಟೇ ಅಲ್ಲ….

ನಾಗಪುರ: ಬಿಸಿಲಿನಿಂದ 26 ಜನ ಆಸ್ಪತ್ರೆಗೆ, 2 ಮರಣ

12 ಜನರ ಬಲಿ ಪಡೆದ ಖಾರ್ಘರ್ ಬಿಸಿಲು

ಬೇಸಿಗೆ ಬವಣೆ, ಅರಣ್ಯದಲ್ಲಿ ಆನೆಗಳ ಮರಣ ಮೃದಂಗ

ಪಾಲ್ಗರ್ ನಲ್ಲಿ ಬೇಸಿಗೆಯ ಬೇಗೆಯಲ್ಲಿ 7 ಕಿ.ಮೀ. ನಡೆದುಕೊಂಡು ಹೋದ ಗರ್ಭಿಣಿಯೊಬ್ಬರು ಬಿಸಿಲಿನಿಂದ ಸಾವನ್ನಪ್ಪಿದ್ದಾರೆ.

               ಈ ಬಾರಿಯ ಬಿಸಿಲಿನ ಶಾಖದ ಹೊಡೆತಕ್ಕೆ ಮನುಷ್ಯರು, ಜಾನುವಾರುಗಳು, ಪಕ್ಷಿಗಳು, ಇತರೆ ಜೀವ ಜಂತುಗಳು ತತ್ತರಿಸಿ ಹೋಗಿವೆ. ಇತ್ತೀಚೆಗೆ ದೇಶದಲ್ಲಿಯೇ ಅತಿ ಹೆಚ್ಚು 56 ಡಿಗ್ರಿ ಸೆಲ್ಸಿಯಸ್ ತಾಪಮಾನ ನಾಗಪುರದಲ್ಲಿ ದಾಖಲಾಗಿದೆ.ಪರಿಸರದ ಮೇಲಿನ  ಕೆಟ್ಟ ಪರಿಣಾಮಗಳಿಂದಾಗಿ ಈ ಎಲ್ಲ ಅನಾಹುತಗಳು ಸಂಭವಿಸತೊಡಗಿವೆ.

             ಇದೆಲ್ಲವನ್ನು ಹೋಗಲಾಡಿಸಿ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ರಂದು ನಾವೆಲ್ಲ “ವಿಶ್ವ ಪರಿಸರ ದಿನ”ವನ್ನು ಆಚರಿಸುತ್ತೇವೆ. ಅಂದು ಅನೇಕ ಸರ್ಕಾರಿ, ಸರ್ಕಾರೇತರ ಸಂಘ -ಸಂಸ್ಥೆಗಳು, ಶಾಲೆ, ಕಾಲೇಜುಗಳು, ಸಮುದಾಯಗಳು ಹಾಗೂ ಸಂಘಟನೆಗಳ ವತಿಯಿಂದ ಪರಿಸರ ಸಂರಕ್ಷಣೆಯ ಕುರಿತಾದ ಸಭೆ ಸಮಾರಂಭಗಳು, ಸಸಿ ನೆಡುವ ಕಾರ್ಯಕ್ರಮಗಳು ಜರುಗುತ್ತಲೇ ಇವೆ…..

              ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯೂಟ್ಯೂಬ್, ವಾಟ್ಸಾಪ್, ಟೆಲಿಗ್ರಾಂಗಳಲ್ಲಿ ವಿಶ್ವ ಪರಿಸರ ದಿನದಂದು ಇದರ ಕುರಿತಾದ ಪೋಸ್ಟರ್ಸ್, ಬ್ಯಾನರ್, ಸ್ಟೇಟಸ್, ರೀಲ್ಸ್, ವಿಡಿಯೋಗಳದ್ದೇ ದರ್ಬಾರು….

ಪರಿಸರ ಮಾಲಿನ್ಯ ನಿಲ್ಲಿಸಿ, ನಮ್ಮ ಗ್ರಹವನ್ನು ಉಳಿಸಿ.

ಕಸ ಹಾಕುವ ಮುನ್ನ ಯೋಚಿಸು.

ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಪೋಷಿಸೋಣ.

ನಮ್ಮ ಪರಿಸರವನ್ನು ಉಳಿಸೋಣ ಬೆಳೆಸೋಣ.

ಗ್ರಹ ಉಳಿಸಲು ಕೈಜೋಡಿಸಿ.

ನಿಮ್ಮ ಧ್ವನಿಯನ್ನು ಹೆಚ್ಚಿಸಿ ಮಾಲಿನ್ಯವನ್ನಲ್ಲ.

ಹಸಿರೇ ಉಸಿರು.

ಪರಿಸರ ಉಳಿಸಿ ಉಪಕಾರ ಮಾಡಿ.

ಭೂಮಿತಾಯಿಗೆ ನೀನು ಬೇಕು.

ಉಸಿರಾಡಲು ಪ್ರೀತಿಸಿ, ಮರಗಳನ್ನು ಉಳಿಸಿ.

ಈ ಎಲ್ಲ ಘೋಷಣೆಗಳದ್ದೇ ಕಾರಬಾರು….

ಈ ಬಾರಿಯ ಘೋಷ ವಾಕ್ಯ - “ಭೂಮಿ ಮರು ಸ್ಥಾಪನೆ, ಮರುಭೂಮಿಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ.”

ಇದೆಲ್ಲ ಒಂದೇ ದಿನದ ನಾಟಕವೇ….?

ನಾವೆಲ್ಲ ಎತ್ತ ಸಾಗುತ್ತಿದ್ದೇವೆ….?

               ಅಭಿವೃದ್ಧಿ ಹೆಸರಲ್ಲಿ ವಿನಾಶದ ಹಾದಿ ತುಳಿಯುತ್ತಿದ್ದೇವೆ. ನಾವು ತೋಡಿದ ಖೆಡ್ಡಾದಲ್ಲಿ ನಾವೇ ಬಿದ್ದು ಏಳಲಾಗದೆ ಒದ್ದಾಡುತ್ತಿದ್ದೇವೆ. ಕಿಂಚಿತ್ತು ಯೋಚಿಸದೆ ಪ್ರಕೃತಿಯನ್ನು ಧಾರಾಳವಾಗಿ ನಾಶ ಮಾಡುತ್ತಿದ್ದೇವೆ. ನಮ್ಮ ಈ ಶೋಕಿ ಹಾಗೂ ಆಧುನಿಕತೆಯ ಖಯಾಲಿಯಿಂದ ಪರಿಸರಕ್ಕೆ ಪೆಟ್ಟು ಬೀಳುತ್ತಿದೆ.

               ಔದ್ಯೋಗಿಕರಣ, ರಸ್ತೆಯ ಅಗಲೀಕರಣ, ಕಾಂಕ್ರೀಟ್ ರಸ್ತೆಗಳು, ದೊಡ್ಡ ಬಂಗಲೆ, ಪ್ರತಿಯೊಬ್ಬರಿಗೂ ಒಂದೊಂದು ಬೈಕ್, ಮನೆಗೆ ನಾಲ್ಕಾರು ಕಾರು, ವಿದ್ಯುತ್ ಇಲ್ಲದ ಜೀವನವಿಲ್ಲ, ಪ್ರತಿ ರೂಮಲ್ಲಿ AC, ಕಾರಲ್ಲಿ AC, ಬಾರಲ್ಲಿ AC, ಬಸ್ಸಲ್ಲಿ AC, ಟ್ರೈನ್ ನಲ್ಲಿ AC, ಆಫೀಸ್ ನಲ್ಲಿ AC, ವಿಮಾನಿನಲ್ಲಿ‌ AC …. ಅಬ್ಬಾ, AC  ಅಂದರೀಗ ಫ್ಯಾಷನ್ ಹಾಗೂ ಪ್ರತಿಷ್ಠೆ. ವಿಲಾಸಿ ಜೀವನ ಶೈಲಿ ಕೈಗೊಂದು ಮೊಬೈಲು, ಹೆಗಲಿಗೊಂದು ಲ್ಯಾಪ್‌ಟಾಪ್, ಇಂಟರ್ನೆಟ್ಟು ಇವೆಲ್ಲ ಉಸಿರಾಡಲು ಬೇಕೇ ಬೇಕು ಎಂಬಂತಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಲೇ ಇದ್ದೇವೆ. ತಂತ್ರಜ್ಞಾನ ಮುಂದುವರಿಯುತ್ತಲೇ ಇದೆ. ಜೊತೆಗೆ ಸಾವಿರಾರು ರೋಗಗಳನ್ನು ಬರಮಾಡಿಕೊಳ್ಳುತ್ತಲೇ ಇದ್ದೇವೆ.

           ಬಿಸಿಲಿನ ಹೊಡೆತ, ನೀರಿಗೆ ಹಾಹಾಕಾರ, ಅಂತರ್ಜಲ ಕುಸಿತ, ಮಳೆ ಬಾರದೇ ರೈತರ ಆತ್ಮಹತ್ಯೆ, ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ ಸಾಕೇ….. ಬೇಕೇ….?ಸಾಕೆನ್ನುವ ಮಾತೇ ಇಲ್ಲ ಪ್ರಕೃತಿಯಿಂದ ಬಾಚಿ ದೋಚಿಕೊಳ್ಳುವ ಚಾಳಿಯನ್ನು ನಾವೆಲ್ಲ ಬೆಳೆಸಿಕೊಂಡಿದ್ದೇವೆ. ಪಡೆಯುವುದು ಅಷ್ಟೇ, ಕೊಡುವ ಮಾತೇ ಇಲ್ಲ. ದಿನನಿತ್ಯದ ಜೀವನದಲ್ಲಿ ಪರಿಸರ ನಾಶವನ್ನೇ ಕಾಯಕವನ್ನಾಗಿಸಿ, (ಪ್ಲಾಸ್ಟಿಕ್ ಬಳಕೆ, ಪರಿಸರ ಮಾಲಿನ್ಯ, ಅತಿಯಾದ ನೀರಿನ ಬಳಕೆ, ಮರಗಳನ್ನು ಕಡಿಯುವುದು ಇತ್ಯಾದಿ) ಪ್ರತಿ ವರ್ಷ ಜೂನ್ 5 ರಂದು ಮಾತ್ರ “ವಿಶ್ವ ಪರಿಸರ ದಿನಾಚರಣೆ”ಯ ನೆಪದಲ್ಲಿ ಸಸಿ ನೆಡುವ ಸೋಗು!!

                ಪರಿಸರದಿಂದ ಪಡೆಯುವ ಶುದ್ಧ ನೀರು, ಗಾಳಿ, ಆಹಾರ ಎಲ್ಲದರಲ್ಲಿ ನಾವಿಂದು ವಿಷ ಬೆರೆಸಿ ಆ ವಿಷವನ್ನು ನಾವೇ ದಿನನಿತ್ಯ ಸೇವಿಸುತ್ತಾ ನಮ್ಮ ಸಾವಿಗೆ ನಾವೇ ಕಾರಣರಾಗುತ್ತಿದ್ದೇವೆ. ನಮ್ಮ ಜೀವ ನಮ್ಮ ಕೈಯಲ್ಲಿಯೇ ಇದೆ. ಆದರೆ ಅದನ್ನು ದೇಹದಿಂದ ಬೇರ್ಪಡಿಸುತ್ತಿದ್ದೇವೆ. ಹಾಲಿನ ಬದಲು ಹಾಲಾಹಲ ಸೇವಿಸುತ್ತಿದ್ದೇವೆ.

ವಿಲಾಸಿ ಜೀವನಕ್ಕಾಗಿ ಯಾವುದೇ ರಾಜಿ ಬೇಡವೆನ್ನುತ್ತ ಪರಿಸರ ನಾಶಕ್ಕೆ ರಾಜಿಯಾಗುವುದೇ….?

                ನಾವು ಪರಿಸರವನ್ನು ಒಂದು ಪಟ್ಟು ನಾಶಪಡಿಸಿದರೆ ಅದು ನಮ್ಮನ್ನು ಹತ್ತು ಪಟ್ಟು ನಾಶಪಡಿಸುತ್ತದೆ. ಇದೆಲ್ಲವೂ ನಮ್ಮ ಅರಿವಿಗೆ ಬಾರದೇ ಇರದು, ಆದರೂ ನಾವು ಇಂದಿಗೂ ಎಚ್ಚೆತ್ತುಕೊಂಡಿಲ್ಲ. ಸಾಗರದಲ್ಲಿನ ಒಂದು ಹನಿಯ ಸಾವಿರದ ಒಂದನೇ ಭಾಗದಷ್ಟು ಜನ ಮಾತ್ರ ಪರಿಸರದ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಅದನ್ನು ನಾವೆಲ್ಲ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ,  ಓದುತ್ತಿದ್ದೇವೆ ಅಷ್ಟೇ….

ಅವರಲ್ಲಿ…

               ಮೂಕ ಪೃಥ್ವಿಗೆ ಮಾತು ಕೊಟ್ಟ  ಕಿಶೋರಿ - ಗ್ರೇತಾ ಥನ್ ಬರ್ಗ್, ಮೇಧಾ ಪಟ್ಕರ್,  ಸಾಲುಮರದ ತಿಮ್ಮಕ್ಕ, ಬಾಬಾ ಆಮ್ಟೆ, ಸುಂದರಲಾಲ ಬಹುಗುಣ, ಶಿವರಾಮ ಕಾರಂತ್, ಭಾರತದ ಫಾರೆಸ್ಟ್ ಮ್ಯಾನ್ ಜಾದವ್ ಮೊಲಾಯ್ ಪಾಯಂಗ್, 1.3 ಮಿಲಿಯನ್‌ ಸಸಿಗಳನ್ನು ನೆಟ್ಟ 13 ವರ್ಷದ ಪೋರಿ…. The Tree  girl of Africa - Ellyanne Wanjiku Chystun, 10 ಸಾವಿರ ಮರಗಳ ಸರದಾರ ರಾಯಚೂರಿನ ಈರಣ್ಣ ಇವರೆಲ್ಲ ತಮ್ಮ ಜೀವನವನ್ನೇ ಪರಿಸರಕ್ಕಾಗಿ ಪಣಕ್ಕಿಟ್ಟವರು.

        ಪ್ರತಿಯೊಬ್ಬರಿಗೂ ಇದು ಸಾಧ್ಯವಾಗದ ಮಾತು ಆದರೆ ನಮ್ಮ ಸಾಮರ್ಥ್ಯ, ವ್ಯಾಪ್ತಿ, ಶಕ್ತಿ ಇನ್ನಿತರೆ ಅನುಕೂಲತೆಗಳೊಂದಿಗೆ ಇಂತಿಷ್ಟಾದರೂ ಮಾಡಬಹುದಲ್ಲವೇ…..

# ನಮ್ಮ ಮನೆ ಅಂಗಳ, ಶಾಲಾ,ಕಾಲೇಜುಗಳ ಆವರಣ, ನಾವಿರುವ ಹಳ್ಳಿ, ಊರುಗಳಲ್ಲಿ ಸಸಿ ನೆಟ್ಟು ಬೆಳೆಸುವುದು.

# ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು.

# ನೀರು ಹಾಗೂ ವಿದ್ಯುತ್ತಿನ ಮಿತವಾದ ಬಳಕೆ.

# ಹಸಿ - ಒಣ ಕಸಗಳ ಸೂಕ್ತ ವಿಲೇವಾರಿ.

# ಸಾಧ್ಯತೆಗಳಿದ್ದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು.

# ಮಳೆ ನೀರು ಕೊಯ್ಲು ( ಶಾಲೆ, ಕಾಲೇಜು, ಮನೆ, ಕಚೇರಿಗಳಲ್ಲಿ )

# ಅಗತ್ಯವಿದ್ದಾಗ ಮಾತ್ರ ಕಾರಿನ ಬಳಕೆ.

# AC ಯ ದಾಸರಾಗುವುದು ಬೇಡ.

# ಬಟ್ಟೆ ಚೀಲಗಳ ಬಳಕೆ.

# ರಾಸಾಯನಿಕ ಗೊಬ್ಬರಗಳ ಬದಲು-ಸಾವಯವ ಗೊಬ್ಬರಗಳ ಬಳಕೆ.

# ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ.

# ಸೋಲಾರ್ ಬಳಕೆ.

# ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸುವುದು.

# ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ.

ನಮಗೆ ಈ ಮೇಲಿನ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯತೆಗಳಿವೆ.

                 ನಮ್ಮ ದೇಶದ ನಿರ್ದಿಷ್ಟ ಅರಣ್ಯ ಪ್ರದೇಶದ ಪ್ರಮಾಣ 33% ಇರಬೇಕು. ಆದರೆ 2024 ರ ಪ್ರಕಾರ 24.62% ಇದೆ. ಕರ್ನಾಟಕ ರಾಜ್ಯದ 2024ರ ಅರಣ್ಯ ಪ್ರದೇಶದ ಪ್ರಮಾಣ 21.2% ಇದೆ. ಅಗತ್ಯ ಅರಣ್ಯ ಪ್ರದೇಶದ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ಸರಕಾರವು ಗುರುತರ ಹೆಜ್ಜೆಯನ್ನಿಡಬೇಕು. ಯೋಜನೆಗಳನ್ನು ಹಾಕಿಕೊಂಡು , ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸಲೇಬೇಕು…..ಅದಕ್ಕೆ ಇನ್ನಷ್ಟು ತಡ ಮಾಡಿದರೆ ನಮಗೆಲ್ಲ ಉಳಿಗಾಲವಿಲ್ಲ.

ಋಣವ ತೀರಿಸಬೇಕು, ಋಣವ ತೀರಿಸಬೇಕು |

ಋಣವ ತೀರಿಸುತ ಜಗದಾದಿ ತತ್ವವನು 

ಜನದಿ ಕಾಣುತ್ತಿದರೊಳ್ ಒಂದಗೂಡಲು ಬೇರು |

ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ


ಹುಚ್ಚು ಹೆಚ್ಚಲಿ


ಅದೆಷ್ಟು ಪ್ರೀತಿ ಅಡಗಿದೆ ;

ಬಿಡುವುದಿಲ್ಲ ಮುತ್ತಿಬಿಡುವೆ !

ಸಿರಿಯ ಕಂಡು ಹಿಗ್ಗಿಬಿಡುವೆ ;

ಬಾಹುಗಳಿಂದ ಬಾಚುವೆ !


ತಲೆಯ ಹೊರೆಯ ಇಳಿಸುವೆ ;

ಭಾರ ಹಗುರ ಮಾಡುವೆ !

ಭಕ್ತಿ ಭಾವದಿಂದ ಪೂಜೆಗೈವೆ ;

ಜಪಿಸುತ ಸುತ್ತು ಹೊಡೆವೆ !


ಸದಾ ಸಮರ್ಪಿಸಿಕೊಂಡಿರುವೆ

ಮೈಯನೊಡ್ಡಿ ಮಳೆ-ಗಾಳಿ-ಚಳಿಗೆ !

ನಿನ್ನ ಕುಲವನೆಲ್ಲ ಪೊರೆವೆ ,

ಆದರೂ ಕತ್ತಿಯನೇಕೆ ಮಸಿಯುವೆ ?


ಮತಿಯಲಿ ಮಣ್ಣು ತುಂಬಿದ ಮಂಕೆ ;

ನಾನೊಂದು ಚೇತನ ನೀನರಿಯೆ !

ಕಡಿಯದಿರು ಹೃದಯವನು ;

ತಪ್ಪು ಮಾಡಿ ಕಲ್ಲು ದೇವರ ಪ್ರಾರ್ಥಿಸುವೆ, 

ಭೂ ಒಡಲೇ ಬಾಯ್ದೆರೆದು ನುಂಗೀತು ಜೋಕೆ !


ಸೂರ್ಯನ ಸಹನೆ ಕಟ್ಟೆ ಒಡೆದು,

ಬೆಂಕಿಯುಂಡೆಯಾದ ನೋಡು !

ನದಿ-ಹಳ್ಳ-ಕೊಳ್ಳ ಬರಿದಾಗಿ ,

ಖಗ-ಮೃಗ-ಪಕ್ಷಿ ಹಲುಬುತ್ತಿವೆ !


ಕೇಳು ಕೂಸೆ ನನ್ನ ಮಾತು ;

ನಮ್ಮಿಬ್ಬರ ನಡುವ ಕೊಂಡಿ

ಕಳಚದಿರಲಿ ಎಂದಿಗೂ !

ನನ್ನ ಕುಲವ ಬೆಳೆಸು ನೀನು,

ನಿನ್ನ ಕುಲವದು ಉಳಿಯಲಿ !


ಹಸಿರು ಹುಚ್ಚು ಹೆಚ್ಚಲಿ ;

ಜಗವದು ತಣಿಯಲಿ ;

ಜೀವ-ಜಂತು ನಲಿಯಲಿ !!


-ಉಷಾ ಗೊಬ್ಬೂರ

02/06/2024






 

Thursday, March 7, 2024

ಹೆಣ್ಣು-ಮಹಿಳೆ-ಸ್ತ್ರೀ

 









#ಉಷಾ ಗೊಬ್ಬೂರ

ಉಪಾಧ್ಯಕ್ಷರು, ಬಿಜಿವಿಎಸ್-ಕಲಬುರಗಿ


ಹೆಣ್ಣು-ಮಹಿಳೆ-ಸ್ತ್ರೀ

              ಇತ್ತೀಚೆಗೆ ಕೆಲಸದ ನಿಮಿತ್ತ ಕಂದಾಯ ಇಲಾಖೆ ಕಚೇರಿಗೆ ಹೋಗಿದ್ದೆ. ಅಲ್ಲಿನ ಬಹಳ ಜನರು ಸಂಬಂಧಿಸಿದ ಅಧಿಕಾರಿಗಳಿಗಾಗಿ ಕಾಯುತ್ತಿದ್ದರು. ನಾನು ಅಲ್ಲಿಯೇ ಗಾರ್ಡನ್ನಿನ ಬೆಂಚಿನ ಮೇಲೆ ಕುಳಿತುಕೊಂಡೆ. ಬಿಸಿಲಲ್ಲಿ ತಿರುಗಿ ಬಳಲಿದ ಐವತ್ತರ ಆಸುಪಾಸಿನ ಮಹಿಳೆಯೊಬ್ಬಳು ನನ್ನ ಬಳಿ ಬಂದು ಕುಳಿತುಕೊಂಡಳು. ಕಣ್ಣುಗಳಲ್ಲಿ ನಿರಾಸೆ ತುಂಬಿತ್ತು. ನಾನು ಆ ಮಹಿಳೆಯೊಂದಿಗೆ ಮಾತನಾಡಲು ತೊಡಗಿದೆ. ಅವಳು ವಿಧವಾ ವೇತನಕ್ಕಾಗಿ ಅರ್ಜಿ ಹಾಕಿದ್ದು, ಅದು ತಿರಸ್ಕೃತಗೊಂಡು ಮತ್ತೆ ಹೊಸದಾಗಿ ಅರ್ಜಿ ಹಾಕಿ ಅದಕ್ಕಾಗಿ ತಾನು ಅಲೆದಾಡುತ್ತಿರುವ ವಿಷಯವನ್ನು ಹಂಚಿಕೊಂಡಳು. ಮಾತು ಮುಂದುವರಿಸುತ್ತಾ ತನ್ನ ವೈಯಕ್ತಿಕ ಬದುಕಿನ ವ್ಯಥೆಯನ್ನು ಹೇಳಲಾರಂಬಿಸಿದಳು. ಈ ಮೊದಲು ಅವಳ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದು, ಆ ಮಹಿಳೆಯ ಗಂಡ ಒಳ್ಳೆಯ ಉದ್ಯೋಗಸ್ಥನಾಗಿದ್ದ. ಬದುಕಿಗೆ ಯಾವುದೇ ಕೊರತೆ ಇಲ್ಲದೆ ಸಂತಸದ ಜೀವನ ಸಾಗಿಸುತ್ತಿದ್ದರು. ಬೇಡ ಎಂದರೂ ಕೇಳದೆ ಸಾಲ ಮಾಡಿ ಮೂರು ಕೋಟಿಯ ಬಂಗಲೆ ಕಟ್ಟಿಸಿದ್ದ. ಇಬ್ಬರು ಗಂಡು ಮಕ್ಕಳಲ್ಲಿ ಚಿಕ್ಕವನು ದೈಹಿಕ ನ್ಯೂನತೆಯನ್ನು ಹೊಂದಿದ್ದು ಆರೈಕೆಗೆ ಸದಾ ಒಬ್ಬರು ಇರಬೇಕಾದ ಸ್ಥಿತಿಯಲ್ಲಿದ್ದನು. ತಡವಾಗಿಯಾದರೂ ಅವನಿಗೆ ಶಾಲೆಗೆ ಸೇರಿಸಲಾಗಿತ್ತು. ಹೀಗಿರುವಾಗ ಆ ಮಹಿಳೆಯ ಗಂಡ ಉದ್ಯೋಗದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ. ಮಾಡಿದ ಸಾಲಕ್ಕೆ ಮೂರು ಕೋಟಿ ಬೆಲೆಬಾಳುವ ಮನೆಯನ್ನು ತೀರಾ ಕಡಿಮೆ ಅಂದರೆ ಒಂದು ಕೋಟಿಗೆ ಮಾರಿ ಬೆಂಗಳೂರು ತೊರೆದು ಕಲಬುರಗಿಗೆ ಬಂದು ಸೇರಿದರು. ಈ ಆಘಾತ ತಡೆದುಕೊಳ್ಳದೆ ಆಕೆಯ ಗಂಡ ಹೃದಯಾಘಾತದಿಂದ ತೀರಿ ಹೋದನು. ಇದರಿಂದ ಆ ಮಹಿಳೆಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಅವಳು ಪದವೀಧರೆಯಾಗಿದ್ದಳು. ತಾನು ಕೂಡ ಏನಾದರೂ ಒಂದು ಉದ್ಯೋಗಕ್ಕೆ ಸೇರಿಕೊಳ್ಳುವೇನೆಂದರೆ ಆಕೆಯ ಗಂಡ ನಮಗೇನು ಕಮ್ಮಿಯಾಗಿದೆ ? ನೀನು ಕೆಲಸ ಮಾಡುವುದು ಬೇಡವೆಂದು ತಡೆದಿದ್ದನಂತೆ. ಅದರ ಪರಿಣಾಮ ಆಕೆ ಈಗ ಆರ್ಥಿಕವಾಗಿ ಬೇರೆಯವರ ಮೇಲೆ ಅವಲಂಬಿತವಾಗಿರುವ ಪರಿಸ್ಥಿತಿ ಎದುರಾಗಿದೆ. ಗಂಡನ ಮನೆಯವರು ಅವರ ಪಾಲಿನ ಎರಡು ಕೋಣೆಗಳನ್ನು ಕೊಟ್ಟು ಮುಕ್ತರಾಗಿದ್ದಾರೆ. ಯಾವುದೇ ಆರ್ಥಿಕ ಸಹಾಯ ಮಾಡುತ್ತಿಲ್ಲ. ಅವಳ ತವರಿನವರೇ ಅವಳ ಹಾಗೂ ಮಕ್ಕಳ ಜೀವನೋಪಾಯಕ್ಕೆ ಸಹಾಯ ಮಾಡುತ್ತಿದ್ದಾರೆ. ಆ ಮಹಿಳೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರತಿ ತಿಂಗಳಿನ ವೈದ್ಯಕೀಯ ಖರ್ಚು ಕೂಡ ತಂದೆ ಹಾಗೂ ತಮ್ಮ ಭರಿಸುತ್ತಿದ್ದಾರೆ. ಅವರ ತಾಯಿಯೂ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹೇಗಾದರೂ ಮಾಡಿ ತಾನು ಒಂದು ಉದ್ಯೋಗ ಹುಡುಕಿಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದಾಳೆ. ಆದರೆ ಅವಳ ಓದು ಹಾಗೂ ವಯಸ್ಸಿಗೆ ಉದ್ಯೋಗ ದೊರೆಯುತ್ತಿಲ್ಲ. ತನ್ನ ಎಲ್ಲಾ ನೋವನ್ನು ತೋಡಿಕೊಳ್ಳುವಷ್ಟರಲ್ಲಿ ದುಃಖ ಮಡುಗಟ್ಟಿ ಗದ್ಗದಿತಳಾಗಿ ಗಳಗಳ ಅಳತೊಡಗಿದಳು. ದುಃಖ, ನಿರಾಸೆ, ನೋವು ಅಸಹಾಯಕತೆ ಇವೆಲ್ಲವುಗಳಿಂದ ನಲುಗಿ ಬದುಕು ಭಾರವಾಗಿ ಜೀವಂತ ಗೊಂಬೆಯಂತೆ ಕಾಣುತ್ತಿದ್ದಳು. “ಮದುವೆಯ ನಂತರ ಉದ್ಯೋಗಕ್ಕೆ ಸೇರಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ, ಈಗಿನ ಪರಿಸ್ಥಿತಿಯಲ್ಲಿ ಬೇರೆಯವರಿಗೆ ಹೊರೆಯಾಗದೆ ಮಕ್ಕಳನ್ನು ನೋಡಿಕೊಳ್ಳಬಹುದಿತ್ತು.” ಎಂಬ ಅವಳ ಮಾತಿನಲ್ಲಿಯ ನೋವಿನ ತೀವ್ರತೆ ಕಣ್ಣುಗಳನ್ನು ಒದ್ದೆಯಾಗಿಸಿದವು.

ಇನ್ನೊಂದು ಘಟನೆ…….

          ಹಿಂದಿನ ವರ್ಷ ಮಾರ್ಚ್ 9ರಂದು ಸ್ಕೂಟಿಯಲ್ಲಿ ಕಲಬುರಗಿಯ ಜಗತ್ ವೃತ್ತದ ಬಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದೆ. ಆಗ ಕುಡಿದ ಮತ್ತಿನಲ್ಲಿದ್ದ ಒಬ್ಬ ಅವಿವೇಕಿ ತನ್ನ ಹೆಂಡತಿಯನ್ನು ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸುತ್ತಿದ್ದ. ಅವಳು ಎಷ್ಟು ಗೋಗರೆದರೂ ಬಿಡದೆ ಹೊಡೆಯುತ್ತಿದ್ದ. ತಾಯಿಯ ರೋಧನೆ ಕಂಡ ಚಿಕ್ಕ ಮಕ್ಕಳು ಕೂಡ ಹೆದರಿ ಅಳುತ್ತಿದ್ದವು.

          ಅದೆಷ್ಟೋ ದುಡಿಯುವ ಮಹಿಳೆಯರು ಕೂಡ ಆರ್ಥಿಕವಾಗಿ ಸ್ವತಂತ್ರರೂ ಅಲ್ಲ, ಸಬಲರೂ ಅಲ್ಲ. ಅವರ ಸಂಬಳ ಎಷ್ಟಿದೆ ಎಂದು ಅರಿಯದ ಮುಗ್ಧರು ಕೂಡ ನಮ್ಮ ಸುತ್ತ ಇದ್ದಾರೆ. ಅದೆಷ್ಟೋ ನೌಕರ ದಂಪತಿಗಳಾದವರು ಹೆಂಡತಿಯ ಬ್ಯಾಂಕ್ ಪಾಸ್ ಬುಕ್,  ಎ.ಟಿ.ಎಂ. ಅವಳಿಗೆ ತೋರಿಸಿಯೇ ಇಲ್ಲ. ಆನ್ಲೈನ್ ಹಣದ ವ್ಯವಹಾರವಂತು ದೂರವೇ ಉಳಿಯಿತು.

           ಇಂದಿಗೂ ಅದೆಷ್ಟೋ ಹೆಣ್ಣುಮಕ್ಕಳು ಘನತೆ, ಗೌರವ ಹಾಗೂ ಉತ್ತಮ ಕೌಟುಂಬಿಕ ಮತ್ತು ಸಾಮಾಜಿಕ ಸ್ಥಾನಮಾನ ದೊರೆಯದೆ ಲಿಂಗ ತಾರತಮ್ಯಕ್ಕೆ ಬಲಿಯಾಗಿ ಶೋಷಣೆ, ಹಿಂಸೆ, ನಿಂದನೆ ಹಾಗೂ ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಸ್ವತಂತ್ರ ಚಿಂತನೆ, ಅಭಿವ್ಯಕ್ತಿ, ಆತ್ಮವಿಶ್ವಾಸ, ಆತ್ಮ ಗೌರವಗಳನ್ನು ಕಳೆದುಕೊಂಡು “ಸಬಲರ ಮುಖವಾಡದೊಳಗಿನ ಅಸಬಲರಾಗಿದ್ದಾರೆ.”

       ಇದು ನಮ್ಮ ನೆರೆಯ ಹೆಣ್ಣು ಮಕ್ಕಳ ದುರಾವಸ್ಥೆಯಾದರೆ,  ನಮ್ಮ ಮನೆಯಲ್ಲಿಯೇ ಇರುವ ತಾಯಿ, ಅಕ್ಕ, ತಂಗಿ, ಹೆಂಡತಿ, ಮಗಳು ಎಷ್ಟು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬುದನ್ನು ಅರಿಯಬೇಕಿದೆ. ಅವರ ಸ್ಥಿತಿ ಮಳೆಯಲಿ ಸುರಿಸಿದ ಕಣ್ಣೀರಿನಂತಾಗಿದೆ. ಅವರೆಲ್ಲ ಸ್ವತಂತ್ರರೇ….? ಸಂತಸದಿಂದಿದ್ದಾರೆಯೇ……? ಸುರಕ್ಷಿತರೇ…..? 

ಮಹಿಳೆಯರ ಸಮಸ್ಯೆಗಳು ಬಹುತೇಕ ನಿರ್ಲಕ್ಷಿಸಲ್ಪಟ್ಟಿವೆ.

       ಅನಾಗರಿಕ ಯುಗವೆಂದು ಕರೆಸಿಕೊಂಡಿದ್ದ ಶಿಲಾಯುಗದಲ್ಲಿ ಮಹಿಳೆಯರಿಗೆ ಇದ್ದ ಸಮಾನ ಸ್ಥಾನಮಾನ ನಾಗರಿಕತೆ ಬೆಳದಂತೆಲ್ಲ ಎರಡನೇ ದರ್ಜೆಗೆ ಕುಸಿಯಿತು. ಲಿಂಗ ತಾರತಮ್ಯ ಹೋಗಲಾಡಿಸಿ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರಕಿಸುವ ಪ್ರಯತ್ನಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಇವೆ.

        ಬೌದ್ಧ ಧರ್ಮದಲ್ಲಿ ಸ್ತ್ರೀ ಪುರುಷರಿಬ್ಬರು ಸರಿಸಮಾನರು ಎಂದು ಹೇಳಲಾಗಿದೆ. ಸ್ತ್ರೀಯರನ್ನು ಭಿಕ್ಕು ಸಂಘಕ್ಕೆ ಸೇರಿಸಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯಲಾಗಿದೆ. ಎಲ್ಲ ಮಾನವರು ಸರಿಸಮಾನರು ಎಂದು ಸಾರುವುದರೊಂದಿಗೆ ಲಿಂಗ ಆಧಾರಿತ ಅಸಮಾನತೆಯನ್ನು ತಿರಸ್ಕರಿಸಲಾಗಿದೆ. ಬಾಳ ಸಂಗಾತಿ ಆಯ್ಕೆ, ಕಲಿಯುವ ಹಕ್ಕು, ವಿಧವಾ ವಿವಾಹ, ವಿಚ್ಛೇದನ ಹಕ್ಕು, ಆಸ್ತಿಯಲ್ಲಿ ಸಮಪಾಲಿನ ಹಕ್ಕುಗಳನ್ನು ನೀಡಲಾಗಿತ್ತು.

           12ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸಮಗ್ರ ಬದಲಾವಣೆಗಾಗಿ ವಚನ ಕ್ರಾಂತಿಯನ್ನೇ ಮಾಡಿದರು. ಅವರು ಲಿಂಗ ಭೇದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದನ್ನು ಹಲವಾರು ವಚನಗಳಲ್ಲಿ ಕಾಣಬಹುದು.

ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ

ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ 

ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ 

ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

          ಎಲ್ಲ ದುರಂತಗಳಿಗೆ ‘ಹೆಣ್ಣು- ಹೊನ್ನು- ಮಣ್ಣು’ ಕಾರಣ ಎಂದು ಹೇಳುತ್ತಾ ಬಂದಿರುವುದನ್ನು ನಾವು ಅನಾದಿ ಕಾಲದಿಂದಲೂ ರಾಮಾಯಣ, ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿಯೂ ನೋಡುತ್ತೇವೆ. ಜನರ ಮನದಾಳದಲ್ಲಿ ಇಂತಹ ತಪ್ಪು ತಿಳುವಳಿಕೆಯನ್ನು ತುಂಬಲಾಗಿದೆ. ಜೀವನದಲ್ಲಿ ನಡೆಯುವ ಅನಾಹುತಗಳಿಗೆ ಕೇವಲ ಹೆಣ್ಣು, ಹೊನ್ನು, ಮಣ್ಣು ಕಾರಣವಲ್ಲ ಅದಕ್ಕೆ ಹೆಣ್ಣು ಮತ್ತು ಗಂಡು ಇವರಲ್ಲಿರುವ ಆಸೆಯೇ ಕಾರಣವೆಂದು ‘ಅಲ್ಲಮಪ್ರಭು’ ತಮ್ಮ ವಚನದ ಮೂಲಕ ಜನರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು 

ಗಡ್ಡ ಮೀಸೆ ಬಂದರೆ ಗಂಡೆಂಬರು 

ನಡುವೆ ಸುಳಿವಾತ್ಮನು 

ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥ.

ಈ ವಚನದ ಕರ್ತೃ ‘ಗೊಗ್ಗವ್ವೆ’ಯು ಮಹಿಳೆ ಮತ್ತು ಪುರುಷರಲ್ಲಿ ಶಾರೀರಿಕ ರಚನೆಗಳಲ್ಲಿ ಭಿನ್ನತೆ ಇದೆಯೇ ಹೊರತು ಜ್ಞಾನ ಹಾಗೂ ನೈಸರ್ಗಿಕ ಬಯಕೆಗಳಲ್ಲಿ ಯಾವುದೇ ಭಿನ್ನತೆ ಇರದೆ ಸಾಮ್ಯತೆಯನ್ನು ಹೊಂದಿವೆ. ಸಮಾಜವು ಪುರುಷ ಮೇಲು ಹಾಗೂ ಮಹಿಳೆ ಮಾತ್ರ ಕೀಳು ಎಂಬ ಹಣೆಪಟ್ಟಿ ಕಟ್ಟಿದೆ ಎಂದು ಹೇಳಿದರು. ಅನೇಕ ವಚನಕಾರರು ತಮ್ಮ ವಚನಗಳ ಮೂಲಕ ಈ ಲಿಂಗ ಭೇದವನ್ನು ಕಟುವಾಗಿ ಟೀಕಿಸಿದ್ದಾರೆ.

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ 

ಗಂಡು ಗಂಡಾದೆಡೆ  ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ

ಮುನ್ನಿಲ್ಲದ ಸೂತಕಕ್ಕೆ ಜಗ ಮರುಳಾಯಿತು

ನನ್ನ ದೇವ ಚನ್ನ ಮಲ್ಲಿಕಾರ್ಜುನನೆಂಬ ಗುರುವಂಗೆ ಜಗವೆಲ್ಲ ಹೆಣ್ಣು ನೋಡಾ ಅಯ್ಯಾ

‘ಅಕ್ಕಮಹಾದೇವಿ’ ಯು ಮನಕ್ಕೆ ಅಂಟಿದ ಸೂತಕ ಕಳೆದಾಗ ಮಾತ್ರ ಹೆಣ್ಣು ಮತ್ತು ಗಂಡಿನ ಶರೀರ ಸಂರಚನೆ ಕುರಿತಾದ ಕಲ್ಪಿತ ಸೂತಕವೆಂಬ ಭ್ರಮೆಯಿಂದ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ. ವಚನಕಾರರೆಲ್ಲ ಹೆಣ್ಣು ಮತ್ತು ಗಂಡೆಂಬುದು ಜೀವ ವೈವಿಧ್ಯವೆಂದು ತಮ್ಮ ವಚನಗಳ ಮೂಲಕ ಸಾರುತ್ತ ಬಂದಿದ್ದಾರೆ.

        ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಹೋರಾಟದ ಫಲವಾಗಿ ಸಮಾನ ವೇತನ, ಸಮಾನ ಆರ್ಥಿಕ ಅವಕಾಶ, ಸಮಾನ ಕಾನೂನು ಹಕ್ಕುಗಳು, ಸಂತಾನೋತ್ಪತ್ತಿ ಹಕ್ಕುಗಳು, ಮಕ್ಕಳ ಆರೈಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಗಾಗಿ ವಿಶ್ವಸಂಸ್ಥೆಯು 1975 ರಿಂದ ಪ್ರತಿ ವರ್ಷ ಮಾರ್ಚ್ 8 ರಂದು “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಆಚರಿಸಲು ಆರಂಭಿಸಿತು. ಅಂದಿನಿಂದ ನಮ್ಮ ದೇಶದಲ್ಲಿಯೂ ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಆಚರಿಸುತ್ತ ಬರುತ್ತಿದ್ದೇವೆ. ಪ್ರತಿ ವರ್ಷದ ಆಚರಣೆಯು ಮಹಿಳಾ ಹಕ್ಕುಗಳೊಳಗಿನ ನಿರ್ದಿಷ್ಟ ವಿಷಯ ಅಥವಾ ಸಮಸ್ಯೆಯ ಮೇಲೆ ಕೇಂದ್ರೀಕೃತವಾಗಿದೆ.

‘ಹೆಣ್ಣಿಗೆ ಹೆಣ್ಣೇ ಶತ್ರು’, ‘ಹೆಣ್ಣು ಅಬಲೆ’, ‘ಹೆಣ್ಣಿನ ಬುದ್ಧಿ ಮೊಣಕಾಲು ಕೆಳಗೆ’,’ಹೆಣ್ಣು ಅಡುಗೆ ಮನೆಗಷ್ಟೇ ಸೀಮಿತ’ ಹೀಗೆ ಒಂದೇ ಎರಡೇ ಇಂತಹ ನುಡಿಗಳಿಂದ ಸಮಾಜವು ಹೆಣ್ಣುಮಕ್ಕಳನ್ನು ಹತ್ತಿಕ್ಕುವ ಪ್ರಯತ್ನ ಇಂದಿಗೂ ಮಾಡುತ್ತಲೇ ಇದೆ.

ಜಾಗತಿಕ ಮಟ್ಟದಲ್ಲಿ ಮಹಿಳಾ ಸಮಾನತೆಗಾಗಿ ‘ಬುಚಿ ಎಮೆಚೆಟಾ’, ‘ಜೆರ್ಡಾ ಲರ್ನರ್’, ‘ಫ್ಲಾರೆನ್ಸ್ ಮುಂಬಾ’, ‘ಆನ್ ಕೋಯ್ತೇಡ್’, ‘ಆಲೀಸ್ ಶ್ವಾರ್ಜರ್’,‘ ಮಲಾಲಾ ಯುಸುಫ್ ಜಾಯ್’ ಹೀಗೆ ಅನೇಕರು ಹೋರಾಟ ಮಾಡಿದ್ದಾರೆ ಹಾಗೂ ಮಾಡುತ್ತಲೇ ಇದ್ದಾರೆ.

ಅದರಂತೆ ಭಾರತದಲ್ಲಿಯೂ ಕೂಡ ಮೇಧಾ ಪಾಟ್ಕರ್, ಮಧುಕೀಶ್ವರ್, ಬೃಂದಾ ಕಾರಟ್, ಡಾ.ಜಿ.ವ್ಹಿ. ವೆನ್ನಲ, ಎ.ಅರುಳ್ ಮೌಳಿ ಅಷ್ಟೇ ಅಲ್ಲ ಪ್ರಚಲಿತ ನಮ್ಮ ಭಾಗದ ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ ಇವರೆಲ್ಲರು ಮಹಿಳಾ ಅಸಮಾನತೆ ಹೋಗಲಾಡಿಸಲು ಅವಿರತ ಶ್ರಮ ಪಡುತ್ತಲೇ ಇದ್ದಾರೆ. ಆದಾಗ್ಯೂ ನಿರೀಕ್ಷಿತ ಮಟ್ಟದ ಯಶಸ್ಸು ದೊರೆತಿಲ್ಲ.

           ಸ್ವತಂತ್ರ ಭಾರತದಲ್ಲಿ ಸಂವಿಧಾನ ಜಾರಿಯಾದ ನಂತರ ಹಲವು ಕಾನೂನುಗಳು ಮಹಿಳಾ ಪರ ಕಾರ್ಯಕ್ರಮಗಳು ಮತ್ತು ಯೋಜನೆಗಳು ಜಾರಿಗೆ ಬಂದಿವೆ ಅವುಗಳೆಂದರೆ……

ಕೇಂದ್ರದ ‘ಬೇಟಿ ಬಚಾವೋ, ಬೇಟಿ ಪಢಾವೋ’, ‘ಸುಕನ್ಯಾ ಸಮೃದ್ಧಿ’,’ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’,’ಸ್ವಾಧಾರ ಗೃಹ’, ’ಸಖಿ-ಒನ್ ಸ್ಟಾಪ್ ಸೆಂಟರ್’, ಯೂನಿವರ್ಸಲೈಸೇಷನ್ ಆಫ್ ವಿಮೆನ್ ಹೆಲ್ಪ್ ಲೈನ್ -181 ……

ರಾಜ್ಯದ ‘ಸಾಂತ್ವನ ಯೋಜನೆ’, ಬಾಲಕಿಯರ ವಸತಿ ಯೋಜನೆಗಳು, ‘ಭಾಗ್ಯಲಕ್ಷ್ಮೀ ಯೋಜನೆ’.....ಇತ್ಯಾದಿ ಕಾರ್ಯಕ್ರಮಗಳು ಹಾಗೂ ಯೋಜನೆಗಳಿಂದ ಮಹಿಳಾ ಸ್ಥಿತಿಗತಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸುಧಾರಣೆಯಾಗಿದ್ದನ್ನು ಗಮನಿಸಬಹುದು. ಪುರುಷ ಪ್ರಾಬಲ್ಯವಿದ್ದ ಅನೇಕ ವೃತ್ತಿಗಳಲ್ಲಿ ಮಹಿಳೆಯರು ದಾಪುಗಾಲು ಇಟ್ಟಿದ್ದಾರೆ. ಆದರೂ ಕೂಡ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಕೊನೆಗೊಂಡಿಲ್ಲ. ಹಾಗಾಗಿಯೇ ಹಿಂದೆಂದಿಗಿಂತಲೂ ಇಂದು ಮಹಿಳೆಯರು ಸ್ವತಃ ಎಚ್ಚೆತ್ತುಕೊಳ್ಳಬೇಕು. ಏಕವ್ಯಕ್ತಿ ಹೋರಾಟಕ್ಕಿಂತ ಸಂಘಟಿತ ಹೋರಾಟಗಳು ನಡೆಯಬೇಕು.

         ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರು “ಶಿಕ್ಷಣವು ಬದಲಾವಣೆಯ ಅಸ್ತ್ರ. ಈ ಬದಲಾವಣೆಯು ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾದರೆ,ಯಾವುದೇ ಹಿಂಸಾತ್ಮಕ ಕ್ರಾಂತಿ ಇಲ್ಲದೆ ಬದಲಾವಣೆ ಸಾಧ್ಯ. ಬದಲಾವಣೆ ಇರುವ ಒಂದೇ ಒಂದು ಅಸ್ತ್ರವೆಂದರೆ ಶಿಕ್ಷಣ” ಎಂದು ಹೇಳುತ್ತಾರೆ. ಆದರೆ 21ನೇ ಶತಮಾನದಲ್ಲಿನ ಶಿಕ್ಷಿತ ಸಮಾಜದಲ್ಲಿ “ಮಹಿಳಾ ಅಸಮಾನತೆ” ಎಂಬುದು ಮಾರಕವಾಗಿ ಪರಿಣಮಿಸಿದೆ.

        ಬದಲಾದ ಸನ್ನಿವೇಶಗಳಲ್ಲಿ ಹೊಸ ರೀತಿಯ ಹೋರಾಟಗಳ ಅನಿವಾರ್ಯತೆ ಬಂದೊದಗಿದೆ. ಪುರುಷರು ಹಾಗೂ ಮಹಿಳೆಯರ ಅಂತರಂಗದಲ್ಲಿಯೇ ಲಿಂಗ ತಾರತಮ್ಯದ ವಿರುದ್ಧ ಕಿಡಿ ಹೊತ್ತಿ ಅಸಮಾನತೆ ಶಮನವಾಗಬೇಕಿದೆ. ಮಹಿಳೆಯರಷ್ಟೇ ಅಲ್ಲ ಪ್ರಜ್ಞಾವಂತ ಪುರುಷರು ಸಹ ಈ ಹೋರಾಟದಲ್ಲಿ ಭಾಗಿಯಾಗಬೇಕು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮಹಿಳಾ ಸಬಲೀಕರಣ ಮತ್ತು ಸಶಕ್ತೀಕರಣದ ಕ್ರಾಂತಿ ಉಂಟಾಗಬೇಕಿದೆ. ಪ್ರಜ್ಞಾವಂತ ಸಮಾಜದ ಮೂಲಕ ಈ ಅಸಮಾನತೆ ನಿರ್ಮೂಲವಾಗಬೇಕಿದೆ……..




Tuesday, January 23, 2024

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ


 












ಶ್ರೀಮತಿ ಉಷಾ ಗೊಬ್ಬೂರ

ಅಂದು ಬೆಳಿಗ್ಗೆ ದಿನಪತ್ರಿಕೆಯೊಂದನ್ನು ಓದಲೆಂದು ಕೈಗೆತ್ತಿಕೊಂಡಾಗ ಆಘಾತವೇ ಕಾದಿತ್ತು.

ನಾಗರಿಕತೆ, ಸಂಸ್ಕೃತಿ, ಶ್ರೇಷ್ಠತೆಯ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಇದೇ ದಿನಗಳಲ್ಲಿ ಇವುಗಳನ್ನು ಅಣಕಿಸುವಂತೆ ಅಷ್ಟೇ ವ್ಯಾಪಕವಾಗಿ ಮಾನವರಲ್ಲಿ ಹುದುಗಿರುವ ಸ್ವ-ಪ್ರತಿಷ್ಠೆ, ದ್ವೇಷ, ಅನಾಗರಿಕತೆ, ಸಂಸ್ಕೃತಿ ಹೀನತೆಯ ವಾಸ್ತವ ಚಿತ್ರಣವನ್ನು ಬಯಲು ಮಾಡುತ್ತಿರುವ ಅತ್ಯಾಚಾರ, ಬಲಾತ್ಕಾರ, ಶೋಷಣೆ, ಹಿಂಸೆಯಂಥ ಘಟನೆಗಳು. 

ಪತ್ರಿಕೆಯ ಮುಖಪುಟದಲ್ಲೇ ದಪ್ಪಕ್ಷರದಲ್ಲಿ ಬಂದಿದ್ದು -

ಇನ್ನೊಂದು ವಸತಿ ಶಾಲೆಯ ವಿದ್ಯಾರ್ಥಿನಿಗೆ ಮಗು ಜನನ !!!!!!

9 ನೇ ತರಗತಿ ವಿದ್ಯಾರ್ಥಿನಿಯು ಮಗುವಿಗೆ ಜನ್ಮ ನೀಡಿದಳು ! 

ವಸತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಗೆ ಮಗು ಜನನ ! ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿ ! ಭ್ರೂಣಪತ್ತೆ ಜಾಲ ಪತ್ತೆ !  ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು, ಮಗದೊಂದು. ಮನ ಕಲುಕುವ ಸುದ್ದಿಗಳು. ಸ್ತ್ರೀಯರನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ ಎಂದು ಎದೆತಟ್ಟಿ ಹೇಳುವ ನಾಗರಿಕ ಸಮಾಜದ ಅನಾಗರಿಕ ಸಂಸ್ಕೃತಿಯಿದು ! ವಾಸ್ತವದಲ್ಲಿ ಮಹಿಳೆಯ ಕುರಿತಾಗಿ ಈ ಸಮಾಜದ ದೃಷ್ಟಿಕೋನ ಹೇಗಿದೆ ಎಂಬ ಚಿತ್ರಣ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

ಇವೆಲ್ಲವುಗಳ ನಡುವೆ ಇಂದಿನ ಸಮಾಜದಲ್ಲಿ ಮಹಿಳೆಯು ಸುರಕ್ಷಿತಳು ಎಂದು ಹೇಳಬಹುದೇ….?

ಓಡಬೇಡಿ ನಿಲ್ಲಿ ಕಾರ್ಮೋಡಗಳೇ !!

ಧಾರಾಕಾರವಾಗಿ ಮಳೆಯನೊಮ್ಮೆ ಸುರಿಸಿಬಿಡಿ;

ಕೊಚ್ಚಿ ಹೋಗಲಿ ಮೃಗೀಯ ಮನಸುಗಳು ಕೊಳೆಯಂತೆ !!

ನಿರಾಳರಾಗಲಿ ವನಿತೆಯರು ಸ್ವಚ್ಛ ಊರಂತೆ……

ಬಾಲ್ಯವಿವಾಹ, ಬಾಲ ಗರ್ಭಿಣಿ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸೆ, ಹೆಣ್ಣು ಮಕ್ಕಳ ಮಾರಾಟ, ದೌರ್ಜನ್ಯ, ವೇಶ್ಯಾವಾಟಿಕೆ ಹೀಗೆ ಒಂದೇ…. ಎರಡೇ….

ಸಮಾಜದಲ್ಲಿ, ಕುಟುಂಬದಲ್ಲಿ

ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ…

ತನ್ನ ದುಡಿಮೆಯ ಹಣ ಖರ್ಚು ಮಾಡುವಂತಿಲ್ಲ….

ಮಹಿಳೆ ಒಂಟಿಯಾಗಿ ತಿರುಗಾಡುವಂತಿಲ್ಲ….

ಸ್ವತಂತ್ರವಾಗಿ ಬದುಕುವಂತಿಲ್ಲ….

ಕೆಲಸದ ಸ್ಥಳದಲ್ಲಿ ಸುರಕ್ಷಿತಳಲ್ಲ….

ನೆಮ್ಮದಿಯಿಂದ ಉಸಿರಾಡಲೂ ಆಗುತ್ತಿಲ್ಲ….

ಪುರುಷ ಪ್ರಧಾನ ಸಮಾಜವು ತನ್ನ ಅನುಕೂಲಕ್ಕೆ ತಕ್ಕಂತೆ ಹೆಣ್ಣನ್ನು ಉಪಯೋಗಿಸಿಕೊಳ್ಳುತ್ತ, ಧರ್ಮದ ಹೆಸರಿನಲ್ಲಿ ಅವಳು ಇರುವುದೇ ಗಂಡಿಗಾಗಿ ಎಂಬಂತೆ ಗಾಢವಾಗಿ ನಂಬಿಸಿ, ಸ್ವತಃ ಅವಳೇ ಅದನ್ನು ಒಪ್ಪಿಕೊಳ್ಳುವಂತೆ ಮಾಡಿದೆ.

ಇದಕ್ಕೆ ಪುಷ್ಟೀಕರಣ ಎಂಬಂತೆ….

ಮನುಸ್ಮೃತಿಯಲ್ಲಿ ಮನು - 

ಪಿತಾ ರಕ್ಷತಿ ಕೌಮಾರ್ಯೇ! ಭರ್ತಾ ರಕ್ಷತಿ ಯೌವನೇ!

ರಕ್ಷತಿ ಸ್ಥವಿರೇ ಪುತ್ರಾಃ! ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ!

(ಮನುಸ್ಮೃತಿ ಅಧ್ಯಾಯ ೯ ಶ್ಲೋಕ ೩)


ಅಂದರೆ ಸ್ತ್ರೀಯು ಜನಿಸುತ್ತಲೇ ಶೈಶವಾವಸ್ಥೆಯಲ್ಲಿ ತಂದೆ ಅಧೀನದಲ್ಲಿ,ಮದುವೆಯಾದ ನಂತರ ಯವನಾವಸ್ಥೆಯಲ್ಲಿ ಪತಿಯ ಅಧೀನದಲ್ಲಿ,ವೃದ್ಧಾಪ್ಯದಲ್ಲಿ ಮಗನ ರಕ್ಷಣೆಯಲ್ಲಿ ಬಾಳಬೇಕಲ್ಲದೆ ಆಕೆಗೆ ಸ್ವಾತಂತ್ರ್ಯವಾಗಿ ಬಾಳುವ ಹಕ್ಕಿಲ್ಲ.

ನಾಸ್ತಿ ಸ್ತ್ರೀಣಾ ಕ್ರಿಯಾ ಮಂತ್ರೈರಿತಿ ಧರ್ಮವ್ಯವಸ್ಥಿತಿ !

ನಿರಿಂದ್ರಿಯಾ ಹೈಮಂತ್ರಾಶ್ಚಸ್ತ್ರೀಯೋ ನೃತಮಿತ ಸ್ಥಿತಿಃ !!


(ಮನುಸ್ಮೃತಿ ಅಧ್ಯಾಯ ೯ ಶ್ಲೋಕ ೧೮)

ಅಂದರೆ ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಮಂತ್ರ ಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ.

ಹೀಗೆ ಸ್ತ್ರೀಯರ ಸ್ಥಾನಮಾನವನ್ನು ಎಷ್ಟು ಸಾಧ್ಯವೋ ಅಷ್ಟು ನಗಣ್ಯಗೊಳಿಸಿ, ಹೀನಗೊಳಿಸಿ ಮಾಡುವ ಮತ್ತೊಂದು ಕುಚೋದ್ಯವೆಂದರೆ - 

"ಸ್ತ್ರೀಯರನ್ನು ಪೂಜಿಸಿದರೆ ಅಲ್ಲಿ ದೇವತೆಗಳು ವಾಸಿಸುತ್ತಾರೆ.” “ಮಾತೃದೇವೋಭವ”.

ಇಷ್ಟೇ ಅಲ್ಲದೇ....

ಕಾರ್ಯೇಶು ದಾಸಿ !

ಕರುಣೇಶು ಮಂತ್ರಿ !

ಭೋಜ್ಯೇಷು ಮಾತಾ !

ಶಯನೇಶು ರಂಭ !

ಕ್ಷಮಯಾ ಧರಿತ್ರಿ !

ರೂಪೇಷು ಲಕ್ಷ್ಮೀ !

ಹೀಗೆ ಹೊಗಳುತ್ತಾ ಹೊನ್ನ ಶೂಲಕ್ಕೆ ಏರಿಸುವಂತೆ ಭಾಸವಾಗುವ ಈ ವಾಕ್ಯಗಳಲ್ಲಿ ಅಡಕವಾಗಿರುವ ಅಂಶ ಪ್ರತಿಯೊಂದುಕ್ಕೂ ಸ್ತ್ರೀಯರನ್ನು ಪ್ರಮಾಣೀಕೃತಗೊಳಿಸಲಾಗಿದೆ. ಮಿತಿಗಳನ್ನು ಹೇರಲಾಗಿದೆ. ಒಂದೊಂದು ವಿಷಯ ಹಾಗೂ ಕೆಲಸಗಳಿಗೆ ಸ್ತ್ರೀಯರನ್ನು ಅಂಟಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಉನ್ನತಿಗಾಗಿ ಸ್ಥಾನ ಇದ್ದಿದ್ದೇ ಆದಲ್ಲಿ, 

ವಾಸ್ತವದ ಘಟನೆಗಳು ಏನು ಹೇಳುತ್ತಿವೆ….?

ಕೆಲವು ತಥ್ಯಗಳನ್ನು ತಿಳಿಯೋಣ ಬನ್ನಿ…


ಬಾಲ ಗರ್ಭಿಣಿಯರು :

(ಪ್ರಜಾವಾಣಿ ಸುದ್ದಿ)

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 2023 ಜನವರಿಯಿಂದ ನವೆಂಬರ್ ವರೆಗೆ ಈ 11 ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 14 ರಿಂದ 18 ವಯಸ್ಸಿನೊಳಗಿನ 28,657 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ದೇಹ ಗರ್ಭಧಾರಣೆಗೆ ಸಿದ್ಧವಾಗಿರುವುದಿಲ್ಲ. ಇದರಿಂದ ಅಧಿಕ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಅಧಿಕ ತೂಕ, ಮೂರ್ಛೆ, ನಿಶ್ಯಕ್ತಿ, ರಕ್ತ ಹೀನತೆ, ತಲೆ ತಿರುಗುವಿಕೆ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇನ್ನು ಜನಿಸುವ ಮಕ್ಕಳು ಕೂಡ ಆರೋಗ್ಯವಂತರಾಗಿರುವುದಿಲ್ಲ.


ಬಾಲ್ಯವಿವಾಹ :

ಆಡೋ ಹುಡುಗಿಗ್ಯಾಕೋ ಕಾಡೋ ಹುಡುಗನು

ಗಿಳಿಯ ಜೊತೆ ಸೇರಿದಂತೆ ಗಿಡುಗನು

ವಯಸಿಲ್ಲ ಬಯಸಿಲ್ಲ ಮದುವೆ ಮಾಡುತಾರ

ಅರಿವಿಲ್ಲ ಗುರಿಯಿಲ್ಲ ಅವಳೇನು ಆಗುತಾಳ


ವಿಜಯದಬ್ಬೆ ಅವರ ಕವನದ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 10,65 ಬಾಲ್ಯ ವಿವಾಹಗಳು ನಡೆದಿವೆ. 10,352 ಬಾಲ್ಯ ವಿವಾಹ ದೂರುಗಳು ದಾಖಲಾಗಿವೆ. ಬಾಲ್ಯ ವಿವಾಹದಿಂದಾಗಿ ಹೆಣ್ಣು ಮಕ್ಕಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವೈವಾಹಿಕ ಜೀವನಕ್ಕೆ ಸಿದ್ಧರಿರುವುದಿಲ್ಲ. ಇದು ಹೆಣ್ಣುಮಕ್ಕಳ ಶರೀರ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತದೆ. ಮಕ್ಕಳ ಪೋಷಣೆ ಹಾಗೂ ಕುಟುಂಬ ನಿರ್ವಹಣೆಯಲ್ಲಿಯೂ ಕೂಡ ತೊಂದರೆಯನ್ನು ಅನುಭವಿಸುತ್ತಾರೆ. ಅವರ ಭವಿಷ್ಯದ ಕನಸುಗಳು ಈಡೇರದೆ ಜೀವಹಾನಿ ಕೂಡ ಸಂಭವಿಸುತ್ತವೆ. ತಾಯಂದಿರ ಹಾಗೂ ಶಿಶುಗಳ ಮರಣ ಸಂಖ್ಯೆ ಅಧಿಕವಾಗುತ್ತದೆ.


ಹೆಣ್ಣುಮಕ್ಕಳ ಮಾರಾಟ :

2011 ರ ಜನಗಣತಿ ಪ್ರಕಾರ ಭಾರತದ ಲಿಂಗಾನುಪಾತ 1000 ಪುರುಷರಿಗೆ 943. ಲಿಂಗಾನುಪಾತದಲ್ಲಿ ಕಂಡು ಬಂದ ತೀವ್ರ ಏರುಪೇರು ಹಲವಾರು ಜಿಲ್ಲೆಗಳಲ್ಲಿ ಪುರುಷರಿಗೆ ತಮ್ಮದೇ ಪ್ರದೇಶಗಳಲ್ಲಿ ವಿವಾಹ ವಯಸ್ಸಿನ ಯುವತಿಯರು ಸಿಗುವುದೇ ಕಷ್ಟವಾಗಿದೆ. ಈ ಕಾರಣದಿಂದ ಯುವಕರು ಅಕ್ಕಪಕ್ಕದ ರಾಜ್ಯಗಳಿಂದ ವಿವಾಹ ಯೋಗ್ಯ ಯುವತಿಯರನ್ನು ಕೊಂಡು ತರುವ, ಕೆಲವೊಮ್ಮೆ ಅಪಹರಿಸುವ ಸ್ಥಿತಿಗೆ ಬಂದು ಮುಟ್ಟಿದೆ. ಹೀಗೆ ತಂದ ಯುವತಿಯರನ್ನು ಕಾನೂನು ಬದ್ಧವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ವಿವಾಹ ಮಾಡಿಕೊಳ್ಳುವುದಿಲ್ಲ. ಈ ಮಹಿಳೆಯರಿಗೆ ಯಾವುದೇ ಕಾನೂನಿನ ರಕ್ಷಣೆ ಕೂಡ ಸಿಗುವುದಿಲ್ಲ. ಕೊಂಡುಕೊಂಡ ಕುಟುಂಬದ ಎಲ್ಲ ಪುರುಷರ ದೈಹಿಕ ಬಯಕೆಯನ್ನು ಈಡೇರಿಸುವ ದುಸ್ಥಿತಿಗೆ ತಳ್ಳಲ್ಪಡುತ್ತಾಳೆ. ಯುವತಿಯರನ್ನು ಮಾರಾಟ ಮಾಡುವ ದಲ್ಲಾಳಿಗಳ ಮಾಫಿಯಾ ಗ್ಯಾಂಗ್ ಗಳು ಹುಟ್ಟಿಕೊಂಡಿವೆ. ವೈವಾಹಿಕ ವ್ಯವಸ್ಥೆ ಇಲ್ಲದೆ ಕೆಲವು ಸಮುದಾಯಗಳು ಅಳಿವಿನಂಚಿಗೆ ಬಂದಿವೆ. ಕೆಲವರಂತೂ ಮಡಿವಂತಿಕೆ ಬದಿಗಿಟ್ಟು ಬೇರೆ ಕುಲದ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಿದ್ದಾರೆ.


ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ಕರ್ನಾಟಕದ ಉತ್ತರ ಭಾಗವಾದ ಕಲ್ಯಾಣ ಕರ್ನಾಟಕವೆಂದು ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲಿ  ಈ ಹೆಣ್ಣು ಮಕ್ಕಳ ಮಾರಾಟ ಆಘಾತಕಾರಿಯಾಗಿದೆ. ಇದಕ್ಕೆ “ಗುಜ್ಜರ ಕೀ ಶಾದಿ” ಎಂದು ನಾಮಕರಣ ಮಾಡಿ ಗುಜರಾತಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸುವ ಹಾಗೂ ಅದಕ್ಕೆ ಬದಲಾಗಿ ಅವರು ಕೊಡುವ ಒಂದಿಷ್ಟು ಹಣದಿಂದ ಬಡತನದ ಬೇಗೆಯನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ಹೆಣ್ಣು ಹೆತ್ತವರು ಅನುಸರಿಸುತ್ತಿದ್ದಾರೆ.


ಅತ್ಯಾಚಾರ : 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) 2021ರ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ ಸರಾಸರಿ 30000ಕ್ಕೂ ಅಧಿಕ, ಪ್ರತಿದಿನ ಸರಾಸರಿ 87, ಪ್ರತಿ ಗಂಟೆಗೆ 4 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ಎರಡು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಾಖಲಾಗದಿರುವ ಇನ್ನೆಷ್ಟು ಪ್ರಕರಣಗಳಿವೆಯೋ….. ಅಮಲಿನಲ್ಲಿರುವ ವಿಕೃತ ಮನಸ್ಸುಗಳಿಗೆ ಹೆಣ್ಣು ದೇಹವು ಬಲಿಯಾಗುತ್ತಲೇ ಇದೆ. ನಗರ, ಗ್ರಾಮಾಂತರ ಎನ್ನದೆ ಎಲ್ಲಡೆ ಅವ್ಯಾಹತವಾಗಿ ಅತ್ಯಾಚಾರಗಳು ನಡೆಯುತ್ತಿವೆ. ಹಸುಳೆಯಿಂದ ಹಿಡಿದು 60 ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ನಡೆದ ವರದಿಗಳಿವೆ. ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.


ವರದಕ್ಷಿಣೆ :

1961 ರಲ್ಲಿ ವರದಕ್ಷಣೆ ನಿಷೇಧ ಕಾಯ್ದೆ ಭಾರತದಲ್ಲಿ ಜಾರಿಗೆ ತರಲಾಗಿದೆ. ಇಂದಿಗೂ ಕೂಡ ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಸಂಪೂರ್ಣವಾಗಿ ನಿಂತಿಲ್ಲ. ಕಾನೂನಿನ ಕುಣಿಕೆ ಇದ್ದರೂ ರಾಜಾರೋಷವಾಗಿ ನಡೆದಿದೆ. ಎಂತಹ ಸುಶಿಕ್ಷಿತ ಹಾಗೂ ಶ್ರೀಮಂತ ಕುಟುಂಬ ಇದ್ದರೂ ಕೂಡ ಸಾಮಾನ್ಯ ಅಥವಾ ಬಡ ವರ್ಗದ ಪಾಲಕರಿಂದ ವರದಕ್ಷಣೆಗೆ ಬೇಡಿಕೆಯನ್ನು ಇಡುತ್ತಾರೆ. ಕೊಡುವುದರಲ್ಲಿ ಸ್ವಲ್ಪವೂ ಏರುಪೇರು ಆದರೆ ಪರಿಣಾಮ ಮದುವೆ ಮಾಡಿಕೊಂಡ ಹೆಣ್ಣು ಮಗಳ ಮೇಲಾಗುತ್ತದೆ. ಗಂಡನ ಮನೆಯವರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ವರದಕ್ಷಿಣೆ ಕಾರಣಕ್ಕಾಗಿ ಗಂಡನ ಮನೆಯವರು ಹೆಣ್ಣುಮಗಳನ್ನು ಕೊಲೆ ಮಾಡುವ ಮೃಗೀಯತೆ ಇಂದಿಗೂ ಕೊನೆಗೊಂಡಿಲ್ಲ.


ಇಲ್ಲಿ ಇದೆಲ್ಲವನ್ನು ನಾನು ಏಕೆ ಪ್ರಸ್ತಾಪಿಸುತ್ತಿರುವೆ ಅಂದರೆ ….

2008ರ ಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಭಾರತ ಸರ್ಕಾರವು ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ, ಸ್ತ್ರೀ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ”ಯನ್ನು ಆರಂಭಿಸಿತು.


ಜನವರಿ 24 ಭಾರತದ ಇತಿಹಾಸದಲ್ಲಿ ವಿಶೇಷತೆಯನ್ನು ಹೊಂದಿದೆ. ಈ ದಿನದಂದು ಇಂದಿರಾಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2008ರಿಂದ ನಾವೆಲ್ಲ ಮಹಿಳಾ ಸಬಲೀಕರಣ ಹಾಗೂ ಸಶಕ್ತಿಕರಣಕ್ಕಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಇಂದಿಗೂ ಕೂಡ ಇದರ ಉದ್ದೇಶ ಈಡೇರಿಲ್ಲ. ವ್ಯಾಪಕವಾಗಿ ಎಲ್ಲೆಡೆ ಈ ದಿನಾಚರಣೆ ನಡೆಯುತ್ತಿಲ್ಲ. ಸಮಾಜದಲ್ಲಿ ಹೆಣ್ಣು ಮಕ್ಕಳ ಕುರಿತಾದ ದೃಷ್ಟಿಕೋನದಲ್ಲಿ ಬದಲಾವಣೆ ಆಗುತ್ತಿಲ್ಲ.


ಬಹು ದಿನಗಳ ಹಿಂದೆಯೇ

12ನೇ ಶತಮಾನದಲ್ಲಿಯೇ ವಚನಕಾರರು “ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದ ಆಶಯವ”ನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು “ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು” ಎಂಬುದು ನನಗೆ ಬೇಕು ಎಂದು ಹೇಳಿ ಎಲ್ಲಾ ವರ್ಗದ ಸ್ತ್ರೀಯರಿಗಾಗಿ ಕಾನೂನುಗಳನ್ನು ರಚಿಸಿದರು.

1964-65 ರ ಶಿಕ್ಷಣದ ಬಗೆಗಿನ ಕೊಠಾರಿ ಆಯೋಗವು ತನ್ನ ವರದಿಯಲ್ಲಿ “ಶಿಕ್ಷಣವು ಬದಲಾವಣೆಯ ಅಸ್ತ್ರ” ಈ ಬದಲಾವಣೆ ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾದರೆ ಯಾವುದೇ ಹಿಂಸಾತ್ಮಕ ಕ್ರಾಂತಿ ಇಲ್ಲದೆ ಬದಲಾವಣೆ ಸಾಧ್ಯ ಎಂದು ಹೇಳುತ್ತದೆ. ಶಾಲಾ ಕಾಲೇಜುಗಳಲ್ಲಿ ಪಠ್ಯಗಳ ಮಾಧ್ಯಮಗಳಿಂದ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸಿದರೂ ಕೂಡ ಹೆಣ್ಣು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಹಿಂಸೆ, ಅತ್ಯಾಚಾರಗಳು ನಿಲ್ಲುತ್ತಿಲ್ಲ.


ಮಹಿಳಾ ಸಮಾನತೆ ಕುರಿತು ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಬದಲಾವಣೆ ಮಾತ್ರ ಶೂನ್ಯ.

ಎಷ್ಟು ವೇಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ನಾವೆಲ್ಲ ಸ್ವೀಕರಿಸುತ್ತೇವೆಯೋ, ಅಷ್ಟೇ ವೇಗದಲ್ಲಿ ಮಾನವೀಯ ಮೌಲ್ಯ ತತ್ವ ಮತ್ತು ಸಿದ್ದಾಂತಗಳನ್ನು ಸ್ವೀಕರಿಸುತ್ತಿಲ್ಲವೇಕೆ….?

ಒಂದಷ್ಟು ಸಭ್ಯತೆ, ಪ್ರೀತಿ, ಸ್ನೇಹ, ಕರುಣೆ ಸಮಾನತೆ, ಮಾನವೀಯತೆಯನ್ನು ಬೆಳೆಸಿಕೊಳ್ಳುತ್ತಿಲ್ಲವೇಕೆ….?

ತಾವಾಗಿಯೇ ಉತ್ತರವಿಲ್ಲದ ಪ್ರಶ್ನೆಗಳೆಂದು ಕಾಯಾ, ವಾಚಾ, ಮನಸಾ ಸಾಂಪ್ರದಾಯಿಕ ಪದ್ಧತಿಗಳಿಗೆ ತನ್ನನ್ನೊಡ್ಡಿಕೊಂಡು ಜೀವಿಸುತ್ತಿರುವ ಮಹಿಳೆಯರೂ ಕೂಡ ಧ್ವನಿ ಎತ್ತುತ್ತಿಲ್ಲವೇಕೆ….?

“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂದು ರಾಷ್ಟ್ರಕವಿ ಕುವೆಂಪು ಅವರು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ.

ಆದರೆ ಹೆಣ್ಣು ಮಕ್ಕಳ ಎದೆಯ ದನಿ ಕೇಳಲು ಕಿವಿಗಳಿವೆಯೇ ?

ಹೆಣ್ಣು ಇರುವುದು ಕೇವಲ ಗಂಡಿಗಾಗಿಯೇ ಅಲ್ಲ…

ಅವಳು ಮೊದಲು ಅವಳಿಗಾಗಿ …

ಅವಳು ಕೂಡ ಗಂಡಿನಂತೆಯೇ 

ಸಕಲ ಜೀವರಾಶಿಗಳಲ್ಲಿ ಒಬ್ಬಳು.


"ಹೆಣ್ಣನ್ನು ದೇವತೆಯೆಂದು ಪೂಜಿಸುವುದು ಬೇಡ; ತನ್ನಂತೆ ಸರಿಸಮಾನಳು ಎಂದು ಭಾವಿಸಬೇಕಿದೆ‌."


Thursday, January 11, 2024

ಸ್ವಾಮಿ ವಿವೇಕಾನಂದರು - ರಾಷ್ಟ್ರೀಯ ಯುವ ದಿನ


 







"ಸ್ವಾಮಿ ವಿವೇಕಾನಂದರು - ರಾಷ್ಟ್ರೀಯ ಯುವದಿನ"

- ಉಷಾ ಗೊಬ್ಬೂರ


           ಅಮೇರಿಕದ ಒಬ್ಬ ಮಹಿಳೆ ಭಾರತೀಯ ಯುವಕನ ಮಾತು, ವ್ಯಕ್ತಿತ್ವಗಳಿಂದ ಆಕರ್ಷಿತರಾಗಿ ಆ ಯುವಕನ ಹತ್ತಿರ ಬಂದು ನನ್ನನ್ನು ನೀವು ಮದುವೆಯಾಗಬೇಕು ಎಂದು ನಿವೇದಿಸಿಕೊಂಡಳು. ಅವರು ಯಾಕೆ ತಾಯಿ ಎಂದು ಕೇಳಿದರು. ಆಗ ಆ ಮಹಿಳೆ “ನಿಮ್ಮಂತೆಯೇ ಜ್ಞಾನವಂತನಾದ ಮಗುವನ್ನು ಹೆತ್ತು ಈ ಜಗತ್ತಿಗೆ ಕೊಡುಗೆಯಾಗಿ ನೀಡಬೇಕು” ಎಂದಳು. ಇದಕ್ಕೆ ಆ ಯುವಕ “ನಾನೊಬ್ಬ ಸನ್ಯಾಸಿ, ನಿಮ್ಮನ್ನು ಮದುವೆಯಾಗಲು ಸಾಧ್ಯವಿಲ್ಲ. ನಿಮಗೆ ನನ್ನಂತಹ ಮಗು ಬೇಕೆಂಬ ಆಸೆ ಇದ್ದರೆ ನನ್ನನ್ನೇ ಮಗುವೆಂದು ತಿಳಿದುಕೊಳ್ಳಿ. ನಿಮ್ಮ ಆಸೆ ಈಡೇರಿದಂತಾಗುತ್ತದೆ ಅಂದರು. ಆ ಮಹಿಳೆ ತನ್ನ ಬಯಕೆಗೆ ಪಶ್ಚಾತ್ತಾಪ ಪಟ್ಟು ಯುವಕನ ಶಿಷ್ಯಳಾಗುತ್ತಾಳೆ‌. ಇಂತಹ ಮಹೋನ್ನತ ವ್ಯಕ್ತಿತ್ವವುಳ್ಳ ಮಹಾಪುರುಷನನ್ನು ನೀವೀಗಾಗಲೇ ಊಹಿಸಿರುತ್ತೀರಿ ಎಂದಾದ ಮೇಲೆ 'ಅವರು ಬೇರೆ ಯಾರೂ ಅಲ್ಲ' ಮಹಾನ್ ತತ್ವಜ್ಞಾನಿ, ದೇಶಭಕ್ತ, ಸಮಾಜ ಸುಧಾರಕ, ಭಾರತಾಂಬೆಯ ವರಪುತ್ರ, ಧೀಮಂತ ಸನ್ಯಾಸಿ ಸ್ವಾಮಿ ವಿವೇಕಾನಂದರು.

          ಸ್ವಾಮಿ ವಿವೇಕಾನಂದರು 1863, ಜನವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ ಹಾಗೂ ತಾಯಿ ಭುವನೇಶ್ವರಿ ದೇವಿ. ಇವರ ಬಾಲ್ಯದ ಹೆಸರು ನರೇಂದ್ರ. ನಂತರ ಸ್ವಾಮಿ ವಿವೇಕಾನಂದರೆನಿಸಿಕೊಂಡರು. ಬಾಲ್ಯದಲ್ಲಿ ನರೇಂದ್ರ ತುಂಟತನ, ಚತುರತೆ ಹಾಗೂ ಬುದ್ಧಿವಂತಿಕೆಗೆ ಹೆಸರಾಗಿದ್ದರು. ಭಿಕ್ಷುಕರು ಮನೆಗೆ ಬಂದರೆ ಮೈಮೇಲಿನ ಬಟ್ಟೆಯನ್ನೇ ಕೊಟ್ಟುಬಿಡುತ್ತಿದ್ದರು. ದುರ್ಬಲರ ಉದ್ಧಾರಕ್ಕಾಗಿ, ಬಡ ಜನರ ಸೇವೆಗಾಗಿ,ಮಹಿಳೆಯರ ಸಬಲೀಕರಣಕ್ಕಾಗಿ, ಯುವಕರಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದರು. 

        “ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ.” ಎಂಬ ಪ್ರಖರ ವಾಣಿಯ ಮೂಲಕ ಯುವಕರನ್ನು ಬಡಿದೆಬ್ಬಿಸಿ, ಅವರ ಮನೋಬಲವನ್ನು ಹೆಚ್ಚಿಸಿ, ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ ಮಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ಇವರ ಹೆಸರಿನಲ್ಲೇ ಒಂದು ಶಕ್ತಿ ಇದೆ. ಕೇವಲ ಹೆಸರು ಕೇಳಿದರೆ ಸಾಕು ದೇಹದಲ್ಲಿ ಮಿಂಚಿನ ಸಂಚಾರವಾಗುತ್ತದೆ. ಒಂದಿಡೀ ದೇಶವನ್ನೇ ಆವರಿಸಿಕೊಂಡು ಬದಲಾವಣೆಯ ಹೊಸ ಪರ್ವವನ್ನೇ ತರಬಲ್ಲ ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ಗಾಂದೀಜಿ, ಅಂಬೇಡ್ಕರ್ ಅವರಂಥ ಮಹಾನ್ ನಾಯಕರಲ್ಲಿ  ಸ್ವಾಮಿ ವಿವೇಕಾನಂದರು ಒಬ್ಬರು.

     “ಯುವಶಕ್ತಿಯಲ್ಲೇ ದೇಶದ ಭವಿಷ್ಯವಿದೆ” ಎಂಬುದನ್ನು ಮನಗಂಡು ಯುವಶಕ್ತಿಯನ್ನು ಇನ್ನಿಲ್ಲದಂತೆ ಎಚ್ಚರಿಸಿದವರು ವಿವೇಕಾನಂದರು.. ಭಾರತವು ಬಡತನ, ಅನಕ್ಷರತೆ, ಮೌಢ್ಯತೆ, ಪಾಶ್ಚಾತ್ಯರ ದಾಸ್ಯ, ಅಜ್ಞಾನದಂತಹ ಕೂಪಗಳಲ್ಲಿ ಬಿದ್ದು, ಒದ್ದಾಡುತ್ತಿರುವ ದಿನಗಳಲ್ಲಿ ಈ ಎಲ್ಲ ಋಣಾತ್ಮಕ ಪರಿಸ್ಥಿತಿಗಳ ಪರಿಹಾರಕ್ಕಾಗಿ ಯುವಪಡೆಯನ್ನು ಅಸ್ತ್ರವನ್ನಾಗಿ ಬದಲಿಸ ಹೊರಟರು. 

         ಭಾರತೀಯ ಸಮಾಜದ ಬದುಕನ್ನು ಅರ್ಥಪೂರ್ಣವಾಗಿ ತಿದ್ದಲು ದೃಢಸಂಕಲ್ಪ ಮಾಡಿದರು. ಧರ್ಮದ ಹೆಸರಿನಲ್ಲಿನ ಮೌಢ್ಯವನ್ನು ಖಂಡಿಸಿದರು. ”ಸದೃಢ ದೇಹದಲ್ಲಿ ಸದೃಢ ಮನಸ್ಸು” ನೆಲೆಗೊಂಡಿರುತ್ತದೆಂದು ಹೇಳಿ ಉತ್ತಮ ಶರೀರದ ಮಹತ್ವದ ಜೊತೆಗೆ ಧನಾತ್ಮಕ ಚಿಂತನೆ ಕೈಗೊಳ್ಳಲು ಪ್ರೇರೇಪಿಸಿದರು. “ದರಿದ್ರ ದೇವೋ ಭವ” ಅಂದರೆ ಬಡಜನರ ಸೇವೆಯನ್ನು ಮಾಡುವುದೆಂದರೆ, ನಿಜವಾಗಿ ನಾರಾಯಣನ ಸೇವೆ ಮಾಡಿದಂತೆ ಎಂದು ತಿಳಿಸಿಕೊಟ್ಟರು. ಯುವಕರಲ್ಲಿ ವೈಚಾರಿಕತೆ, ದೇಶಭಕ್ತಿ, ದೇಶಾಭಿಮಾನ ಮೂಡಿಸಿ, ಸುಂದರ ಬದುಕನ್ನು ಕಟ್ಟಿಕೊಳ್ಳಲು ಕರೆ ನೀಡಿದರು. ವಿವೇಕಾನಂದರು ಮೊದಲು ದೇಶದಾದ್ಯಂತ ಸಂಚರಿಸಿ, ದೇಶದ ಕಲ್ಯಾಣಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಿ, ಅಲ್ಲಿನ ಜನರಿಗೆ ಭಾರತದ ಜ್ಞಾನ, ಸಂಸ್ಕೃತಿಯನ್ನು ಪರಿಚಯಿಸಿ, ಭಾರತಕ್ಕೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಡಬೇಕೆಂಬುದು ಅವರ ಮಹದಾಸೆಯಾಗಿತ್ತು. ಅಂದುಕೊಂಡ ಸಮಯಕ್ಕೆ ಸರಿಯಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲೆಂದು ಅಮೇರಿಕಾಕ್ಕೆ ಹೊರಟರು. 

           1893 ಸಪ್ಟೆಂಬರ್ 11 ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು “ಅಮೇರಿಕಾದ ಸಹೋದರ, ಸಹೋದರಿಯರೇ” ಎಂದು ಆತ್ಮೀಯತೆಯಿಂದ ಸಂಬೋಧಿಸಿದರು. ಈ ಚಿಕ್ಕ ವಾಕ್ಯ ಕೇಳಿದೊಡನೆಯೇ ತುಂಬಿದ ಸಭೆ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರತಾಡನ ಮಾಡುವ ಮೂಲಕ ವ್ಯಕ್ತಪಡಿಸಿತು. ಪುಟ್ಟ ಭಾಷಣದ ಮೂಲಕ ಎಲ್ಲರ ಮನಸೂರೆಗೊಂಡು, ಭಾರತೀಯತೆಯ ಹಿರಿಮೆಯನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಯುರೋಪಿನ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ಹಿರಿಮೆಯನ್ನು ಎತ್ತರಿಸಿದರು.

        “ಆಶಿಷ್ಟರೂ, ಬಲಿಷ್ಟರೂ, ದೃಢಿಷ್ಟರೂ, ಮೇಧಾವಿಗಳೂ ಆದಂತಹ ಯುವಕರು ಮಾತ್ರ ಭಗವಂತನನ್ನು ಪಡೆಯಬಹುದು.” ಎಂದು ವೇದ ಸಾರುವುದು. ತಾರುಣ್ಯದ ಶಕ್ತಿ ಇರುವಾಗ ನಿಮ್ಮ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ. ಮುದುಕರಾಗಿ ಶಕ್ತಿ ಕುಗ್ಗಿದ ಮೇಲೆ ಅಲ್ಲ. ನವತಾರುಣ್ಯದ ಉತ್ಸಾಹದಲ್ಲಿ ಅದನ್ನು ನಿರ್ಧರಿಸಬೇಕಾಗಿದೆ. ಕೆಲಸ ಮಾಡಿ; ಈಗ ತಾನೇ ವಿಕಸಿತವಾದ, ಯಾರೂ ಮುಟ್ಟದ, ಮೂಸಿ ನೋಡದ ಹೂವುಗಳನ್ನು ಭಗವಂತನ ಅಡಿದಾವರೆಯಲ್ಲಿಡುವುದಕ್ಕೆ ಇದೇ ಸಮಯ. ದೇವರು ಇದನ್ನು ಮಾತ್ರ ಪರಿಗ್ರಹಿಸುವನು ಎಂದು ವಿವೇಕಾನಂದರು ಯುವಕರಿಗೆ  ಕರೆ ನೀಡಿದರು. ಅದರಂತೆ ಈ ಕೆಳಗಿನ ಸಂದೇಶಗಳನ್ನು ನೀಡಿದರು.

1. ”ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.”

2. ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಬಿಟ್ಟುಬಿಡುತ್ತೀರಿ.

3. ನೀವು ನಿಮ್ಮನ್ನು ನಂಬದ ಹೊರತು, ನಿಮ್ಮ ದೇವರನ್ನು ನಂಬಲು ಸಾಧ್ಯವಿಲ್ಲ.

4. ನಿಮಗೆ ಸಹಾಯ ಮಾಡುವ ಜನರನ್ನು ಎಂದಿಗೂ ಮರೆಯಬೇಡಿ. ನಿಮ್ಮನ್ನು ಪ್ರೀತಿಸುವವರನ್ನು ಎಂದಿಗೂ ದ್ವೇಷಿಸಬೇಡಿ. ನಿಮ್ಮನ್ನು ನಂಬಿದವರಿಗೆ ಎಂದಿಗೂ ಮೋಸ ಮಾಡಬೇಡಿ.

5. ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಗಮನ ಅಗತ್ಯ. ಧ್ಯಾನದ ಮೂಲಕ ನಾವು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು.

6. ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ. ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ.

7. ಯಾವ ವ್ಯಕ್ತಿಯು ಅಮರತ್ವವನ್ನು ಪಡೆದಿರುತ್ತಾನೋ ಅವನು ಯಾವುದೇ ಲೌಕಿಕ ವಸ್ತುಗಳಿಂದ ವಿಚಲಿತನಾಗುವುದಿಲ್ಲ.

8. ದೈಹಿಕವಾಗಿ, ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ, ಅದನ್ನು ವಿಷದಂತೆ ತಿರಸ್ಕರಿಸಿ.

9. ಯಾವಾಗಲೂ ನಾವು ಮಾತನಾಡುವ ಮುನ್ನ ಸರಿಯಾಗಿ ಯೋಚನೆ ಮಾಡಿ ಮಾತನಾಡಬೇಕು. ನಮ್ಮ ಆಲೋಚನೆಗಳು ಯಾವಾಗಲೂ ಜೀವಂತವಾಗಿರುತ್ತವೆ ಮತ್ತು ಪದಗಳು ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಸಂಚರಿಸುತ್ತಲೇ ಇರುತ್ತದೆ.

10. ಹೋರಾಟವು ದೊಡ್ಡದಾಗಿದ್ದರೆ, ವಿಜಯವು ಹೆಚ್ಚು ಅದ್ಭುತವಾಗಿರುತ್ತದೆ. ನೀವು ಸಮಸ್ಯೆಗಳನ್ನು ಎದುರಿಸದಿದ್ದರೆ ನೀವು ತಪ್ಪು ದಾರಿಯಲ್ಲಿದ್ದೀರಿ ಎನ್ನುವುದನ್ನು ಖಚಿತವಾಗಿ ಹೇಳಬಹುದು. ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.

11. ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂತಹ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.

12. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

13. ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

          ಯುವಕರು ರಾಷ್ಟ್ರದ ಅಮೂಲ್ಯ ಸಂಪತ್ತು ಮತ್ತು ಆ ದೇಶದ ಶಕ್ತಿ ಕೂಡ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಯುವಕರಲ್ಲಿ ಏನನ್ನೂ ಮಾಡಬಲ್ಲ ಶಕ್ತಿ ಇದೆ. ಇತಿಹಾಸದಲ್ಲಿ ಬಹುತೇಕ ಎಲ್ಲಾ ಕ್ರಾಂತಿಗಳು ಯುವಜನರಿಂದ ಪ್ರಾರಂಭವಾಗುತ್ತವೆ. ಯುವಕರು ಯಾವುದೇ ಸಮಾಜದ ನಿರ್ಮಾಣ ಘಟಕಗಳು. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಹೂಡಿಕೆಗಳಾಗಿವೆ. ಯೌವನವು ಜೀವನದಲ್ಲಿ ಕಲಿಯಬೇಕಾದ ಮತ್ತು ಜೀವನದಲ್ಲಿ ಪ್ರಯೋಗಿಸಬೇಕಾದ ಹಂತವಾಗಿದೆ. 

“My life, My rules” ಎಂಬುದು ಪ್ರಸ್ತುತ ಯುವ ಪೀಳಿಗೆಯ ಧ್ಯೇಯವಾಕ್ಯವಾಗಿದೆ. ಆದರೆ ಇಂದು ಕೆಲವು ಯುವಕರು ಈ ಕೆಳಗಿನ ಸಮಸ್ಯೆಗಳಿಂದ ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿಕೊಂಡಿದ್ದಾರೆ. 

1.  ಮಾದಕ ವ್ಯಸನ : ಯುವಕರು ಧೂಮಪಾನ, ಮಧ್ಯಪಾನ ಹಾಗೂ ಮಾದಕ ಪದಾರ್ಥಗಳ ದಾಸರಾಗಿದ್ದಾರೆ. ವಿನಯ, ವಿಧೇಯತೆ, ನಮ್ರತೆ ಯುವಕರಲ್ಲಿ ಮರೆಯಾಗುತ್ತಿವೆ. ಆಕ್ರಮಣಕಾರಿ ಸ್ವಭಾವದಿಂದ ಹೆತ್ತವರು ಹಾಗೂ ಸಮಾಜದ ಬಗೆಗಿನ ಕಾಳಜಿ ಕಣ್ಮರೆಯಾಗಿದೆ. ರಾಷ್ಟ್ರದ ಶಕ್ತಿಯಾಗಬೇಕಿದ್ದವರು, ದೌರ್ಬಲ್ಯವಾಗಿ ಹೊರ ಹೊಮ್ಮುತ್ತಿದ್ದಾರೆ.


2. ಡಿಜಿಟಲ್ ದಾಸ : ಸೋಶಿಯಲ್ ಮೀಡಿಯಾಗಳಾದ WhatsApp, Instagram, Facebook, YouTube,Twitter, Online gaming, reels, shorts, Internet, Web search, Cyber bulling, Cyber crime ಹೀಗೆ ಒಂದೇ ಎರಡೇ ಮೊಬೈಲ್ ಮಾಯೆಗೆ ಬಲಿಯಾಗಿ ಅಪಾಯಕಾರಿ ಘಟನೆಗಳಿಗೆ/ ಅನಾಹುತಗಳಿಗೆ ಆಹ್ವಾನ ನೀಡುತ್ತಿದ್ದಾರೆ.


3. ಬದಲಾದ ಜೀವನ ಶೈಲಿ : ಕೆಲಸದ ಒತ್ತಡ, ತಡರಾತ್ರಿ ಪಾರ್ಟಿ, ಮೋಜು-ಮಸ್ತಿ, Laptop ಬಳಕೆ, ಟಿ.ವ್ಹಿ. ಮನೋರಂಜನೆ ಇನ್ನಿತರೆ ಕಾರಣಗಳಿಂದ ತಡರಾತ್ರಿ ಮಲಗುವುದು ಇವೆಲ್ಲ ಪ್ರಕೃತಿಯ ವಿರುದ್ಧ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿವೆ.


4. ನೈತಿಕ ಮೌಲ್ಯಗಳ ಕೊರತೆ : ಉತ್ತಮ ಮೌಲ್ಯಗಳ ಕೊರತೆಯಿಂದಾಗಿ ಕುಟುಂಬ, ಸಮಾಜ, ದೇಶ ಹಾಗೂ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ದೇಶದ್ರೋಹಿ ಚಟುವಟಿಕೆಗಳು, ಭಯೋತ್ಪಾದನೆ, ಹೆಣ್ಣು ಮಕ್ಕಳ ಮೇಲೆ ಹಿಂಸೆ, ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರಗಳಂತಹ ಮೃಗೀಯ ಕೃತ್ಯಗಳನ್ನು ಎಸಗುತ್ತಿದ್ದಾರೆ.


5. ನಿರುದ್ಯೋಗ : “Empty mind is devil’s workshop.” ಎನ್ನುವರು. ನಿರುದ್ಯೋಗಿ ಯುವಕರು ಕೆಲಸವಿಲ್ಲದೆ, ಕಂಗಾಲಾಗಿ ಹಣಕ್ಕಾಗಿ ಕೆಟ್ಟ ಹಾದಿಗಳನ್ನು ಅನುಸರಿಸಿ ವಿಕೃತ ಮನಸ್ಸಿನವರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ.


6. ಮಾನಸಿಕ ಒತ್ತಡ : ಯುವ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಖಿನ್ನತೆ, ಆತಂಕ, ಆತ್ಮವಿಶ್ವಾಸದ ಕೊರತೆ, ಭಯ, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯ ಕೊರತೆ, ಕುಟುಂಬದ ಅತಿಯಾದ ನಿರೀಕ್ಷೆ ಈಡೇರಿಸುವಲ್ಲಿನ ಅಸಮರ್ಥತೆ, ಭದ್ರ ಭವಿಷ್ಯ ರೂಪಿಸಿಕೊಳ್ಳುವಲ್ಲಿನ ವೈಫಲ್ಯಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.


7. ಆತ್ಮಹತ್ಯೆ : ಇತ್ತೀಚಿನ ಯುವಕರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳೆ ಹಾಗೂ ಪುರುಷರು ಇಬ್ಬರಲ್ಲೂ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿದೆ.

ಈ ಎಲ್ಲ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿವೆ. ದೇಶದಲ್ಲಿ ಶಾಂತಿ ಹಾಗೂ ಸುಭದ್ರತೆಗೆ ಧಕ್ಕೆಯನ್ನುಂಟು ಮಾಡುತ್ತಿವೆ. 


ಸ್ವಾಮಿ ವಿವೇಕಾನಂದರು ಧೀಮಂತ ಸನ್ಯಾಸಿ, ಭಾರತಾಂಬೆಯ ವರಪುತ್ರ, ಸಮಾಜ ಸುಧಾರಕ, ಮಹಾಪುರುಷ ತಮ್ಮ 39ನೇ ವರ್ಷದ ಕಿರುವಯಸ್ಸಿನಲ್ಲಿಯೇ ಅಂದರೆ 1902ನೇ ಇಸವಿ ಜುಲೈ 4ರಂದು ವಿಧಿವಶರಾದರು. ಭೌತಿಕವಾಗಿ ಇಲ್ಲವಾದರೂ ಅವರ ಸಾಧನೆಗಳು ಹಾಗೂ ಸಂದೇಶಗಳು ಮಾತ್ರ ಅಜರಾಮರ. ಅವರ ಸಂದೇಶಗಳಿಂದ ಜೀವನದ ಅಭ್ಯುದಯಕ್ಕೆ ಎಲ್ಲವೂ ದೊರೆಯುತ್ತದೆ. ಅವರ ಚಿಂತನೆ ಹಾಗೂ ಸಂದೇಶಗಳು ಯುವಕರಿಗೆ ಪ್ರೇರಣೆ ನೀಡಿ ಅವರ ವ್ಯಕ್ತಿತ್ವ ವಿಕಸನಕ್ಕೆ ದಿವ್ಯ ಮಂತ್ರಗಳಾಗಿವೆ. ಹಾಗಾಗಿ ಅವರ ಸಂದೇಶಗಳು ಬರೀ ಬಾಯಿ ಮಾತುಗಳಾಗಿ ಉಳಿಯದೆ ಜೀವನದಲ್ಲಿ ಅಳವಡಿಸಿಕೊಂಡು ಆ ನಿಟ್ಟಿನಲ್ಲಿ ಯುವಕರ ಜೀವನ ಬದಲಾಗುವುದು ಅನಿವಾರ್ಯವಾಗಿದೆ. 1984 ರಿಂದಲೂ ಪ್ರತಿ ವರ್ಷ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ನಾವೆಲ್ಲ “ರಾಷ್ಟ್ರೀಯ ಯುವ ದಿನ” ಎಂದು ಆಚರಣೆ ಮಾಡುತ್ತಲೇ ಬರುತ್ತಿದ್ದೇವೆ. ಬರಿ ಆಚರಣೆ ಮಾಡಿದರೆ ಸಾಲದು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ.

ಯುವಕರೇ…….

ದೇಶಸೇವೆಯೆಂದರೆ, 

ಕೇವಲ ಕೈಯಲ್ಲಿ ಬಣ್ಣ ಬಣ್ಣದ ದೊಡ್ಡ ಧ್ವಜಗಳನ್ನು ಹೊತ್ತು ತಿರುಗುವುದೇ……???

ಜೋರಾಗಿ ಸದ್ದು ಮಾಡುತ್ತ ಬೇಕ್ ರ್ಯಾಲಿಗಳನ್ನು ಮಾಡುವುದೇ….??? 

ಜೋರಾಗಿ ಘೋಷಣೆಗಳನ್ನು ಕೂಗುತ್ತ ತಿರುಗುವುದೇ….??? 

ದೊಡ್ಡದಾಗಿ ಭಾಷಣ ಮಾಡುವುದೇ….???

ಸಭೆ- ಸಮಾರಂಭಗಳನ್ನು ಮಾಡುವುದೇ…..??? 

ಗಡಿಯಲ್ಲಿ ಗನ್ನು ಹಿಡಿದು ನಿಲ್ಲುವುದಷ್ಟೇ ದೇಶಸೇವೆಯಲ್ಲ.


ದೇಶವೆಂದರೆ ಇಲ್ಲಿನ ಜನ, ದೇಶವೆಂದರೆ ಇಲ್ಲಿನ ಸಮಾಜ, ದೇಶವೆಂದರೆ ನಿಮ್ಮೆಲ್ಲರ ಜೀವನ. ಮೊದಲು ಎಲ್ಲ ವಿಷಚಕ್ರಗಳಿಂದ ಹೊರಬಂದು ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ. ಇನ್ನೊಬ್ಬರ ಶ್ರಮವನ್ನು ಕಸಿದು ಜೀವಿಸುವುದನ್ನು ಬಿಟ್ಟು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ನಿಮ್ಮನ್ನು ಸಲುಹಿದ ಸಮುದಾಯಕ್ಕೆ ನೀವೊಂದು ಕೊಡುಗೆ ನೀಡುವಂತಾಗಬೇಕು. ಅಲ್ಲಿಂದಲೇ ಸಶಕ್ತ ಕುಟುಂಬ, ಸಮಾಜ ಹಾಗೂ ದೇಶ ನಿರ್ಮಾಣಗೊಳ್ಳುತ್ತದೆ ಅದುವೇ ನಿಜವಾದ ದೇಶ ಸೇವೆ.


ಯುವಕರೇ ಸಾಕಿನ್ನು ಕಗ್ಗತ್ತಲೆಯಿಂದ ಹೊರಬನ್ನಿ…….. ಎಚ್ಚೆತ್ತುಕೊಳ್ಳಿ…… ಜಾಗೃತರಾಗಿರಿ…..

ವಿಶಾಲ ಮನೋಭಾವವನ್ನು  ಬೆಳೆಸಿಕೊಳ್ಳಿ .

ಘಾತಕ ಕೃತ್ಯಗಳನ್ನು ದಿಕ್ಕರಿಸಿ.

ದೇಹ ಉಕ್ಕಿನಂತಿರಲಿ ಆದರೆ ಅದರಲ್ಲಿ ಪ್ರೀತಿ, ಕರುಣೆ, ಸಹಾನುಭೂತಿ, ದೇಶಾಭಿಮಾನ, ದೇಶಭಕ್ತಿ ನೆಲೆಸಿರಲಿ.

ನೈತಿಕ ಮೌಲ್ಯಗಳನ್ನು ಬೆಳೇಸಿಕೊಳ್ಳಿ.

ಸಮಾನತೆ, ವೈಚಾರಿಕತೆ, ಸಹೋದರತೆ ಹಾಗೂ ಸರ್ವ ಧರ್ಮ ಸಮಭಾವದ ಭಾರತ ಕಟ್ಟಲು ಸನ್ನದ್ಧರಾಗಿ.


ಯುವಕರೇ ನೀವು ಬೇರೆಯವರಿಗಾಗಿ ಅಲ್ಲ, ನಿಮಗೋಸ್ಕರ ಒಳ್ಳೆಯರಾಗುವ ಪಣ ತೊಡಿರಿ.


ಇದು ಬುದ್ಧನ ಭಾರತ….

ಬಸವಣ್ಣ, ಅಂಬೇಡ್ಕರರದ್ದು….

ಗಾಂಧೀಜಿ, ಫುಲೆಯವರದ್ದು….

ಸ್ವಾಮಿ ವಿವೇಕಾನಂದರ ಭಾರತ…..


ಇಂಥ ನೂರಾರು ಸಮಾಜ ಸುಧಾರಕರು, ನಿಜವಾದ ದೇಶೋದ್ಧಾರಕರ ಭಾರತದಲ್ಲಿ ನಾನು ಹುಟ್ಟಿದ್ದೇನೆಂಬುದೇ ನನಗೆ ಹೆಮ್ಮೆ.  ಅವರ ವಿಚಾರಗಳನ್ನು ಅನುಸರಿಸಲು ಪ್ರಯತ್ನಿಸೋಣ…… ಅವರ ತತ್ವಗಳನ್ನು ಕಿಂಚಿತ್ತಾದರೂ ಪಾಲಿಸೋಣ……


ಆಕರ ಗ್ರಂಥಗಳು : 

೧)ಸ್ವಾಮಿ ವಿವೇಕಾನಂದ ( ಕುವೆಂಪು)

೨) ವಿವೇಕಾನಂದ 

೩) ಅಂತರ್ಜಾಲ

Friday, January 5, 2024

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ


     

ಶ್ರೀಮತಿ ಉಷಾ ಗೊಬ್ಬೂರ

  




 


ಕ್ರಾಂತಿಜ್ಯೋತಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಸಾಧನೆಗಳನ್ನು ಮೆಲುಕು ಹಾಕುವ ಮುನ್ನ......

        ದಿನಾಂಕ: 03/01/2024 ರಂದು ಶ್ರೀ ಮಹಾಶಕ್ತಿ ಮಹಿಳಾ ಒಕ್ಕೂಟ ಸಂಘ (ರಿ) ವಾಡಿ ಇವರ ವತಿಯಿಂದ ಆಯೋಜಿಸಲಾದ ೧೯೩ ನೇ ಸಾವಿತ್ರಿಬಾಯಿ ಫುಲೆಯವರ ಜಯಂತಿಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ವಿಷಯಾಂಶ.....

         ಇಂದು ಭಾರತ ದೇಶ ಯಶಸ್ವಿಯಾಗಿ ಮಂಗಳಯಾನ ಹಾಗೂ ಚಂದ್ರಯಾನಗಳನ್ನು ಕೈಗೊಂಡಿದೆ. ಪ್ರಗತಿ ಹೊಂದುತ್ತಿರುವ ದೇಶಗಳ ಪಟ್ಟಿಯಿಂದ ಪ್ರಗತಿ ಹೊಂದಿದ ದೇಶಗಳ ಪಟ್ಟಿಗೆ ದಾಪುಗಾಲಿಡುತ್ತುದೆ. ಈ ಎಲ್ಲ ಸಾಧನೆಗಳ ಜೊತೆಗೆ ಅನೇಕ ಸಮಸ್ಯೆಗಳು ದೇಶದಲ್ಲಿ ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಜಾಗತಿಕ ತಾಪಮಾನ, ನಿಸರ್ಗದ ಮೇಲೆ ಪರಿಣಾಮ, ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಇವೆಲ್ಲವು ಜನರ ಜೀವನದ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತಿರುವುದು ಆಧುನಿಕ ಯುಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾಗಿವೆ.  ಅಷ್ಟೇ ಅಲ್ಲ ಮಾನವನ ಅಂತರಂಗದ ಸೆಲೆಯು ಕೂಡ ಮಲಿನಗೊಂಡು ಸಮಾಜಕ್ಕೆ ಕೆಡುಕಾಗಿ ಪರಿಣಮಿಸುತ್ತಿದೆ. ಇಂದಿನ ಆಧುನಿಕ ಶಿಕ್ಷಣ ವೈಚಾರಿಕ ಜಾಗೃತಿ ಮೂಡಿಸುವ ಬದಲು ಖಾಸಗೀಕರಣಗೊಂಡು ನಗರ ಪ್ರದೇಶಗಳಲ್ಲಿ ಅದೊಂದು ಉದ್ಯಮವಾಗಿ ತಲೆಯೆತ್ತಿದೆ.ಶಿಕ್ಷಣದ ಮೂಲ ಉದ್ದೇಶ ಮರೆಯಾಗುತ್ತಿದೆ. ಸೇವೆಯ ಬದಲು ವ್ಯಾಪಾರವಾಗಿದೆ.

         ಶಿಕ್ಷಣದಿಂದ ಜನರು ಸುಶಿಕ್ಷಿತರಾಗುವ ಬದಲು ಭಾಷೆ, ಧರ್ಮ, ಜಾತಿ, ಉಪಜಾತಿಗಳೆಂಬ ಮಜಲುಗಳನ್ನು ನಿರ್ಮಿಸುತ್ತಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ, ಸಹಬಾಳ್ವೆ, ಸಹಕಾರ, ಸಹಿಷ್ಣುತೆ, ವಿಶ್ವಬಂಧುತ್ವದ ಪಾಠ ಕಲಿಸುವ ಶಿಕ್ಷಣ ದೊರೆತರಷ್ಟೇ ಶಾಂತಿ ನೆಲೆಸಲಿದೆ. ಈ ಎಲ್ಲಾ ಕಾರಣಗಳಿಂದಲೇ ಜೀವನ ಮೌಲ್ಯಗಳನ್ನು ಬಿತ್ತುವ ಶಿಕ್ಷಕ ವೃತ್ತಿ ಕೇವಲ ಉದ್ಯೋಗವಾಗಿರದೇ ಜವಾಬ್ದಾರಿಯುತ ಕೆಲಸವಾಗಿ ಪರಿಗಣಿಸಲ್ಪಟ್ಟಿದೆ. 

         ಮಕ್ಕಳ ಮೇಲೆ ಪಾಲಕರ “ಔಟ್ ಆಫ್ ಔಟ್” ಅಂಕಗಳನ್ನು ಪಡೆಯಬೇಕೆಂಬ ಅತಿಯಾದ ನಿರೀಕ್ಷೆಯಿಂದ ಓದು ಹೊರೆಯಾಗಿದೆ. ಒಂದು ವೇಳೆ ಮಗು ಹಿಂದುಳಿದರೆ, ಹಿಂಸೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸ್ವಸ್ಥ ಜೀವನಕ್ಕಾಗಿ ಜೀವನ ಮೌಲ್ಯಗಳು ಶಿಕ್ಷಣದಿಂದ ಮಕ್ಕಳಿಗೆ ದೊರೆಯುತ್ತಿಲ್ಲ. ಇದರಿಂದಾಗಿ ಕ್ರಮೇಣ ಪ್ರಾಥಮಿಕ ಹಂತದಿಂದ ಉನ್ನತ ಹಂತಕ್ಕೆ ಹೋದಂತೆ ಮಕ್ಕಳು ಕಲಿಕೆಯಿಂದ ಹಿಂದೆ ಸರಿಯುವುದನ್ನು ನಾವು ಕಾಣುತ್ತಿದ್ದೇವೆ. ನಮಗೆ ಸ್ವಾತಂತ್ರ್ಯ ದೊರೆತಾಗ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಕೇವಲ  16% ಇತ್ತು. ಇಂದಿನ ಭಾರತದ ಸಾಕ್ಷರತಾ ಪ್ರಮಾಣ 74% ಇದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆ ಆದರೂ ಕೂಡ ಸಾಕ್ಷರರಾದವರು ನಿಜಕ್ಕೂ ಸುಶಿಕ್ಷಿತರೇ ? ಎಂಬ ಪ್ರಶ್ನೆ ಕಾಡುತ್ತಿದೆ. 

        ಮಕ್ಕಳ ಮೇಲೆ ಅತ್ಯಾಚಾರ ನಿಲ್ಲುತ್ತಿಲ್ಲ. ಬಾಲ ಅಪರಾಧಿಗಳ ಸಂಖ್ಯೆಯು ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಕೆಲವು ವಿಚಾರಶೀಲ ವಿದ್ಯಾರ್ಥಿಗಳು ಧ್ವನಿ ಎತ್ತಿದರೆ, ಶಾಶ್ವತವಾಗಿ ಅವರ ಬಾಯಿ ಮುಚ್ಚಿಸಲಾಗುತ್ತಿದೆ. ಮಕ್ಕಳು ಮತ್ತು ಮಹಿಳೆಯರ ಬದುಕುವ ಹಕ್ಕು ಹಾಗೂ ಅವಕಾಶಗಳು ಮೊಟಕುಗೊಳ್ಳುತ್ತಿವೆ. ಆಧುನಿಕ ಶಿಕ್ಷಣದಿಂದ ದೊರೆಯಬೇಕಾದ ವಿಶ್ವ ಭಾತೃತ್ವದ ಭಾವದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.

        ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯವಂತ ಸುಂದರ ಸಮಾಜದ ನಿರ್ಮಾಣಕ್ಕಾಗಿ ಫುಲೆ ದಂಪತಿಗಳ ಆದರ್ಶಗಳನ್ನು ಹಾಗೂ ತತ್ವಗಳನ್ನು ಅವರ ದೃಷ್ಟಿಕೋನದಲ್ಲಿಯೇ ಅರಿತುಕೊಂಡು ಆ ಹಾದಿಯಲ್ಲಿ ನಡೆಯುವುದು ಅವಶ್ಯಕವಾಗಿದೆ. ಸಾಕಷ್ಟು ಅಡೆತಡೆಗಳನ್ನು ಹಿಮ್ಮೆಟ್ಟಿ ಹೆಣ್ಣುಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿದ ಮೊದಲ ಮಹಿಳಾ ಶಿಕ್ಷಕಿ, ಮಹಾಮಾತೆ ಸಾವಿತ್ರಿಬಾಯಿ ಫುಲೆ ನಮ್ಮೆಲ್ಲರ ಆದರ್ಶವಾಗಬೇಕಿದೆ. 

         19ನೇ ಶತಮಾನದ ಸಮಾಜದಲ್ಲಿ ಅನೇಕ ಮಹಿಳಾ ವಿರೋಧಿ ಕೆಟ್ಟ ಪದ್ಧತಿಗಳು ತಾಂಡವವಾಡುತ್ತಿದ್ದವು. ಅಕ್ಷರವೆಂಬುದು ಮೇಲ್ಜಾತಿಯವರ ಸ್ವತ್ತಾಗಿತ್ತು. ಮಹಿಳೆ ಕೇವಲ ಮಕ್ಕಳನ್ನು ಹೆರುವ ಯಂತ್ರ, ಮನೆಯವರ ಸೇವೆ ಮಾಡುತ್ತಾ ದಾಸ್ಯದ ಬದುಕಿನಲ್ಲಿಯೇ ತೊಳಲಾಡಬೇಕಿತ್ತು. ಅದೆಷ್ಟು ಮಹಿಳಾ ವಿರೋಧಿ ಆಚರಣೆಗಳು ನಮ್ಮ ದೇಶದಲ್ಲಿ ಇದ್ದವು. ಬಾಲ್ಯ ವಿವಾಹ, ವರದಕ್ಷಿಣೆ, ಕೇಶ ಮುಂಡನ, ಮಹಿಳೆ ಭೋಗದ ವಸ್ತು ಹಾಗೂ ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಲೈಂಗಿಕ ಶೋಷಣೆ, ದೇವದಾಸಿ ಪದ್ಧತಿ, ಹೆಣ್ಣುಮಕ್ಕಳೆಂದರೆ ಮನುಷ್ಯರೆಂದು ಪರಿಗಣಿಸಲಾಗದ ವ್ಯವಸ್ಥೆ ಇಂತಹ ಅವಮಾನವೀಯ ಪದ್ಧತಿಗಳು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಕಂಗೆಡಿಸಿದ್ದವು. ಇಂತಹ ಕರಾಳ ವ್ಯವಸ್ಥೆ ಹೋಗಲಾಡಿಸಿ,  ಸುಧಾರಣೆಯ ಸಲುವಾಗಿ ಅಕ್ಷರದ ಬೀಜ ಬಿತ್ತಿದ ಮಹಾನ್ ಚೇತನಗಳೆಂದರೆ ಜ್ಯೋತಿಬಾ ಪುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳು. ಇವರು ಕೊಳೆತು ನಾರುವ ವ್ಯವಸ್ಥೆಯನ್ನು ಕಿತ್ತೆಸೆದು, ಹೆಣ್ಣುಮಕ್ಕಳ ಜೀವನದಲ್ಲಿ ಜ್ಞಾನದ ಜ್ಯೋತಿ ಬೆಳಗಿಸಿದವರು. ಇದು  ಕೇವಲ ಶಿಕ್ಷಣದಿಂದ ಸಾಧ್ಯ ಎಂದು ಅರಿತು ಮಹಿಳೆಯರಿಗೆ ಶಿಕ್ಷಣ ನೀಡುವ ಮಹಾನ್ ಕಾರ್ಯಕ್ಕೆ ಕೈ ಹಾಕಿದರು. ಇದು ಅಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಇವರ ಈ ಕಾರ್ಯಕ್ಕೆ ಅತಿ ದೊಡ್ಡ ನೊಬೆಲ್ ನಂತಹ ಪ್ರಶಸ್ತಿಗಳು ಕೂಡ ಕಡಿಮೆಯೇ. ಅವರ ಈ ದಿಟ್ಟ ಹೆಜ್ಜೆ ಕೆಳವರ್ಗದ ಹಾಗೂ ಮಧ್ಯಮವರ್ಗದ ಸ್ತ್ರೀ-ಪುರುಷರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಸಮಾಜದಲ್ಲಿ ಕ್ರಾಂತಿಯೇ ಉಂಟಾಯಿತು ಎಂದು ಹೇಳಬಹುದು.

          ಅಕ್ಷರದ ದೀವಟಿಗೆ ಹಿಡಿದು ಕತ್ತಲೆಯಲ್ಲಿ ಇದ್ದ ಮಹಿಳೆಯರನ್ನು ಬೆಳಕಿಗೆ ತಂದ ಅಕ್ಷರದವ್ವ ಸಾವಿತ್ರಿಬಾಯಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನಯಾಗಾವನಲ್ಲಿ 1831 ರ ಜನವರಿ 3 ರಂದು ಜನಿಸಿದರು. ಇವರ 9 ನೇ ವಯಸ್ಸಿನಲ್ಲಿ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಜ್ಯೋತಿಬಾ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಮಾಜದ ಚಿತ್ರಣವನ್ನೇ ಬದಲಿಸುವ ದಿಟ್ಟ ಹೆಜ್ಜೆಯನ್ನು ಸ್ವಂತ ಮನೆಯಿಂದಲೇ ಆರಂಭಿಸಿದರು. ಅಂದರೆ ಪತ್ನಿ ಸಾವಿತ್ರಿಗೆ ತಾವೇ ಮನೆಯಲ್ಲಿ ಸ್ವತಹ ಆರಂಭಿಕ ಶಿಕ್ಷಣ ನೀಡಿದರು. ನಂತರ ಶಿಕ್ಷಕ ತರಬೇತಿಯನ್ನು ಕೊಡಿಸಿದರು. ಈ ರೀತಿ ಅವರು ಮೊಟ್ಟಮೊದಲ ಮಹಿಳಾ ಶಿಕ್ಷಕಿಯಾಗಿ ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರು. ಈ ದಂಪತಿಗಳ ಈ ಪಯಣ ಅತ್ಯಂತ ಕಠಿಣವಾಗಿತ್ತು. ಇವರೆಂದು ಎದೆಗುಂದದೆ ದಿಟ್ಟ ಹೆಜ್ಜೆಯನಿಟ್ಟರು. ಯಾರು ಎಷ್ಟೇ ಅಡ್ಡಗಾಲು ಹಾಕಿದರೂ “ತೊಟ್ಟ ಪಣ, ಇಟ್ಟ ಹೆಜ್ಜೆ” ಯಿಂದ ಹಿಮ್ಮೆಟ್ಟಲಿಲ್ಲ. ಕಲ್ಲು, ಸಗಣಿ, ಕೊಳೆತ ಮೊಟ್ಟೆ ಎಸೆದು, ನಿಂದಿಸಿದರೂ , ಅಂಜಿಸಿದರೂ ಅಲುಗಾಡದೆ ದೃಢವಾಗಿ ಎದುರಿಸಿ ಮುನ್ನಡೆದರು ಅಕ್ಷರದವ್ವ ಸಾವಿತ್ರಿಬಾಯಿ. 

"ಜ್ಞಾನ ಇಲ್ಲದಿದ್ದರೆ ಸರ್ವನಾಶ ಆಗುತ್ತೆ,

ವಿವೇಕ ಇಲ್ಲದಿದ್ದರೆ ಆಗ್ತೀವಿ ಪಶುಗಳ ಹಾಗೆ" 

ಎಂದು ಸಾವಿತ್ರಿಬಾಯಿ ತಮ್ಮ ‘ಕಾವ್ಯಫುಲೆ’ ಕವನ ಸಂಕಲನದಲ್ಲಿ ಬರೆದುಕೊಂಡಿದ್ದಾರೆ.ಅಂದರೆ ಸಾಹಿತ್ಯದ ಮೂಲಕವೂ ಶಿಕ್ಷಣದ ಮಹತ್ವ ತಿಳಿಸಿದ್ದಾರೆ.

         ಸಮಾಜಕ್ಕೆ ಇವರ ಕೊಡುಗೆ ಅಪಾರ ಅವುಗಳೆಂದರೆ..... ಹೆಣ್ಣು ಮಕ್ಕಳಿಗಾಗಿ ಶಾಲೆ, ಬಾಲ ಹತ್ಯಾ ನಿವಾರಕ ಕೇಂದ್ರ, ರೈತ ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆಗಳು, ವಿಧವಾ ಪುನರ್ ವಿವಾಹ ಚಳುವಳಿ, ಮನೆಯ ಬಾವಿಯನ್ನು ದಲಿತರಿಗೆ ನೀಡಿದ್ದು, ವಿಧವಾ ಗರ್ಭಿಣಿ ಮಹಿಳೆಯರಿಗೆ ವಸತಿ ನಿಲಯ, ಅನಾಥ ಬಾಲಕಿಯರಿಗೆ ಆಶ್ರಮ, ಸತ್ಯ ಶೋಧಕ ಸಮಾಜದ ಸ್ಥಾಪನೆ ಮಾಡಿದರು. ರೀತಿ ರಿವಾಜು ಮುರಿದು ಸ್ವತಃ ಸಾವಿತ್ರಿ ಪತಿಯ ಚಿತೆಗೆ ಅಗ್ನಿ ಸ್ಪರ್ಶಿಸಿದರು. ಬರಗಾಲಪೀಡಿತ ಜನರ ಸೇವೆ ಮಾಡಿದರು. ಪ್ಲೇಗ್ ರೋಗಿಗಳ ಸೇವೆ, ಹೆಣ್ಣು ಮಕ್ಕಳಿಗೆ ಆಸ್ತಿ ಪಡೆಯುವ ಹಕ್ಕುಗಳಿಗಾಗಿ ಪ್ರತಿಪಾದಿಸಿದರು.  ಹೀಗೆ ಒಂದೇ ಎರಡೇ ಜೀವಿತ ಅವಧಿವರೆಗೆ ಅನೇಕ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡಿದರು. ಇಂದು ನಾವೆಲ್ಲ ಹೆಣ್ಣು ಮಕ್ಕಳು ಶಿಕ್ಷಿತರಾಗಿ ಉನ್ನತ ಸ್ಥಾನದಲ್ಲಿ ಇದ್ದೇವೆ ಎಂದರೆ ಅದು ಅವರ ಅತ್ಯಮೂಲ್ಯ ಕೊಡುಗೆಗಳಿಂದಲೇ ಎಂದು ಎದೆ ತಟ್ಟಿ ಹೇಳಬಹುದು. ಅದೆಲ್ಲವನ್ನು ಸ್ಮರಿಸುತ್ತ ಇಂದು ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. 

ನಿನ್ನ ಜೀವನ ಕುರಿತು ಅದೆಷ್ಟೋ ಪುಸ್ತಕ ಬರೆದಿದ್ದೇವೆ ಅವ್ವ

ಹೊಗಳುತ್ತ ಸಾವಿರಾರು ಕವನ ಕಟ್ಟಿದ್ದೇವೆ ಅವ್ವ

ತಿಂಗಳುಗಟ್ಟಲೇ ಸಭೆ ಸಮಾರಂಭ ಮಾಡುತ್ತಿದ್ದೇವೆ ಅವ್ವ

ನಿನ್ನ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದೇವೆ ಅವ್ವ

ಮಕ್ಕಳಿಗೆ ನಿನ್ನ ವೇಷ ಹಾಕಿಸಿ ಖುಷಿ ಪಡುತ್ತಿದ್ದೇವೆ ಅವ್ವ

ನಿನ್ನ ಹೆಸರಲ್ಲಿ ಸಾಧಕಿಯರಿಗೆ ಪ್ರಶಸ್ತಿ ನೀಡುತ್ತಿದ್ದೇವೆ ಅವ್ವ

ಒಗ್ಗಟ್ಟಾಗಿ ಸಂಘಟಿಸಿ ನಿನ್ನ ಹಾದಿ ತುಳಿಯುತ್ತಿದ್ದೇವೆ ಅವ್ವ

ಇಷ್ಟಾದರೂ ಹೆಣ್ಣಿನ ಶೋಷಣೆ , ಅತ್ಯಾಚಾರ , ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬಾಲ್ಯ ವಿವಾಹ, ಭೋಗಿಸುವುದು ನಿಲ್ಲುತ್ತಿಲ್ಲವಲ್ಲ ಅವ್ವ………

        ಪ್ರತಿದಿನ ಪತ್ರಿಕೆಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೇ ದೌರ್ಜನ್ಯ, ಮಹಿಳೆಯರ ಕೊಲೆ, ಮಗುವಿನ ಮೇಲೆ ಅತ್ಯಾಚಾರ, ಕೆಲಸದ ಜಾಗದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಒಂದಲ್ಲೊಂದು ಘಟನೆಗಳು ಇದ್ದೇ ಇರುತ್ತವೆ. ವಿಕೃತ, ಪೈಶಾಚಿಕ ವಿಷಜಂತುಗಳು ಮಗು ಎಂಬುದನ್ನು ಲೆಕ್ಕಿಸದೆ ಹೊಸಕಿ ಹಾಕುತ್ತಿವೆ. ಗಂಡಸಿನ ಕಾಮ ತೃಷೆಯಾಗಿರಲಿ, ಜನಾಂಗೀಯ ಗಲಭೆಗಳಾಗಿರಲಿ ಬಲಿಯಾಗುತ್ತಿರುವುದು ಮಾತ್ರ ಅಮಾಯಕ ಹೆಣ್ಣು ಮಕ್ಕಳು. 

         ಇತ್ತೀಚಿನ ಹಸಿಹಸಿ ಮನ ಕಲುಕುವ ಘಟನೆಗಳಾದ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ವಸತಿ ಶಾಲೆಯಲ್ಲಿರುವ ಮಕ್ಕಳ ಮೇಲಿನ ಅತ್ಯಾಚಾರ, 12 ವರ್ಷದ ಬಾಲಕಿ ಹರಿದ ರಕ್ತ ಸಿಕ್ತ ಬಟ್ಟೆಯೊಂದಿಗೆ ನಡು ರಸ್ತೆಯಲ್ಲಿ ಪತ್ತೆಯಾಗಿದ್ದು, ನಮ್ಮ ಪಕ್ಕದ ತಾಲೂಕಿನಲ್ಲಿಯೇ ಅಪ್ರಾಪ್ತ ಶಾಲಾ ಬಾಲಕಿಯರನ್ನು ಅತ್ಯಾಚಾರಗೈದು ಕೊಲೆ ಪ್ರಕರಣ, ಬಾಲ್ಯವಿವಾಹ, ವರದಕ್ಷಿಣೆ, ಪಿತೃ ಪ್ರಧಾನ ವ್ಯವಸ್ಥೆಯಿಂದಾಗಿ ದಿನಂಪ್ರತಿ ಗಂಡನಿಂದ ಹೆಂಡತಿ ಮೇಲಾಗುವ ದೌರ್ಜನ್ಯ ಹಾಗೂ ಹಿಂಸೆ ಇವೆಲ್ಲವು ಆಧುನಿಕ  ಭಾರತದ ಲಕ್ಷಣಗಳೇ ? ನಾವೆಲ್ಲ ನಿಜಕ್ಕೂ ಸುಶಿಕ್ಷಿತರೇ ? ವೈಚಾರಿಕತೆ ಉಳ್ಳವರೇ ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ.

          2012- 2022 ರ ವರೆಗೆ ಹತ್ತು ವರ್ಷಗಳಲ್ಲಿ 3,59,247 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ 30,000 ಕ್ಕೂ ಅಧಿಕ ಅದರಂತೆ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು, ಪ್ರತಿ ಗಂಟೆಗೆ ಸರಾಸರಿ 4 ಅತ್ಯಾಚಾರಗಳು, ಪ್ರತಿ ಎರಡು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಈ ಎಲ್ಲ ದೌರ್ಜನ್ಯಗಳನ್ನು ತಡೆಯೊದಕ್ಕೆ ಕಾನೂನು ಎಷ್ಟು ಮುಖ್ಯವೋ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿರೋದು ಅಷ್ಟೇ ಮುಖ್ಯ. ಪೋಷಕರು ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಅವಳು ಭೋಗದ ವಸ್ತುವಲ್ಲ, ಅಮಲಿನ ಪದಾರ್ಥ ಕೂಡ ಅಲ್ಲವೆಂಬ ಸಂಸ್ಕಾರ ನೀಡಬೇಕಿದೆ. ವಿಕೃತ ಮನಸ್ಥಿತಿಗಳು ಬದಲಾಗಬೇಕಿದೆ. ಭಾರತವನ್ನು ಮಹಿಳೆಯರ ಪಾಲಿಗೆ ವಿಶ್ವದಲ್ಲೇ ಅಪಾಯಕಾರಿ ದೇಶವೆಂದು ಗುರುತಿಸಲಾಗುತ್ತಿದೆ. ಮಹಿಳಾ ಸಬಲೀಕರಣವೆನ್ನುವುದು ಮುಖವಾಡವಾಗಿದೆ. ಇಷ್ಟೆಲ್ಲ ಅಪರಾಧಗಳು ನಡೆಯುತ್ತಿವೆ. ಆದರೆ ಅಪರಾಧಿಗಳಿಗೆ ಶಿಕ್ಷೆ ಮಾತ್ರ ಆಗುತ್ತಿಲ್ಲ, ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿ, ಜೈಲಿನಿಂದ ಹೊರ ಬಂದ ಮೇಲೆ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. 

         ಇತ್ತೀಚೆಗೆ ಅನೇಕ ಮಹಿಳಾ ಸ್ವ ಸಹಾಯ ಸಂಘಗಳು ಸ್ಥಾಪಿತಗೊಂಡಿವೆ. ಇದರಲ್ಲಿರುವ ಮಹಿಳಾ ಸದಸ್ಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರೊಂದಿಗೆ ಕುಟುಂಬ ನಿರ್ವಹಣೆ, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಧನ ಸಹಾಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರಿವುದು ಸಂತಸದ ಸಂಗತಿ. ಅದಕ್ಕೆ ಹಲವಾರು ಪುರುಷರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುತ್ತ ಬೆಂಬಲ ಕೂಡ ನೀಡುತ್ತಿರುವುದು ಮಹಿಳೆಯರ ಬಲ ಹೆಚ್ಚಿದಂತಾಗಿದೆ. ಕೆಲವು ಸಂಘ, ಸಂಸ್ಥೆಗಳು ಅಮಾನುಷ ಘಟನೆಗಳ ವಿರುದ್ಧ ಹೋರಾಟ ಮಾಡುತ್ತಲೇ ಇವೆ. ಆದರೆ ಕೆಲವರಲ್ಲಿರುವ ಗಂಡು ಮೇಲೆಂಬ ರೋಗಗ್ರಸ್ಥ ಸಮಾಜದಲ್ಲಿ ಹೆಣ್ಣು ಇಂದಿಗೂ ಭೋಗದ ವಸ್ತುವಾಗಿಯೇ ಉಳಿದುಕೊಂಡಿದ್ದಾಳೆ. ವಿವಿಧ ರಂಗಗಳಲ್ಲಿ ದಾಪುಗಾಲಿಡುತ್ತಿರುವ ಆಧುನಿಕ ಮಹಿಳೆ ಎಂದೆನಿಸಿಕೊಂಡರೂ, ತಮ್ಮ ಮೇಲಾಗುವ ಶೋಷಣೆಗಳ ವಿರುದ್ಧ ಧ್ವನಿ ಎತ್ತದಿರುವುದು, ವಿಪರ್ಯಾಸವೇ ಸರಿ. ಕೌಟುಂಬಿಕ ಜೀವನದಲ್ಲಿ ಅದೆಷ್ಟೋ ಮಹಿಳೆಯರು ತಮ್ಮ ಮೇಲಾಗುವ  ಹಿಂಸೆ ಹಾಗೂ ದೌರ್ಜನ್ಯಗಳನ್ನು ಸಹಿಸುತ್ತಿರುವುದು,   ಕಣ್ಣಿದ್ದು ಕುರುಡಾದಂತಾಗಿದೆ. ತನ್ನ ನೆಮ್ಮದಿಯ ಜೀವನ, ಸುಂದರ ಬದುಕಿಗಾಗಿ ಎಲ್ಲಿಯವರೆಗೆ ಸ್ವತಃ ದಿಟ್ಟತನದ ಹೆಜ್ಜೆ ಇಡುವುದಿಲ್ಲವೋ ಅಲ್ಲಿಯವರೆಗೆ ಸಮಾನತೆಯನ್ನು ಕಾಣಲು ಸಾಧ್ಯವಿಲ್ಲ.

         ಎಷ್ಟೇ ಕಠಿಣ  ಕಾನೂನು ತಂದರೂ ಕೂಡ ಬಾಹ್ಯವಾಗಿ ನಿಯಂತ್ರಣ ಹೇರುವುದಕ್ಕಿಂತ ಆಂತರಿಕವಾಗಿ ಗಂಡಿನ ಮನಸ್ಥಿತಿಗಳು ಬದಲಾಗಬೇಕು. ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸಿ ಗೌರವಿಸುವಂತಾಗಬೇಕು. ಜಿಡ್ಡುಗಟ್ಟಿದ ಪುರುಷ ಪ್ರಧಾನತೆಯ ಸಮಾಜ ನಶಿಸಿ, ಸಮಾನತೆಯ ಬೀಜ ಬೆಳೆದು ಹೆಮ್ಮರವಾಗಬೇಕು. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕು. ಅದು ಸಾಧ್ಯವಾಗುವುದು ನಮ್ಮಿಂದಲೇ……

          ಇತ್ತೀಚೆಗೆ ನಾವು ನಾಯಿಕೊಡೆಯಂತೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿರುವ ಸಂಘ ಸಂಸ್ಥೆಗಳನ್ನು ಕಾಣುತ್ತಿದ್ದೇವೆ. ಅದರಲ್ಲಿ ಬಹುತೇಕವುಗಳು ಸಭೆ, ಸಮಾರಂಭ, ಶಾಲು, ಹಾರ, ಪ್ರಶಸ್ತಿಗಳಿಗಷ್ಟೇ ಜೋತು ಬಿದ್ದಿರುವುದು ನೋವಿನ ಸಂಗತಿ. ಸೋಶಿಯಲ್ ಮೀಡಿಯಾಗಳಲ್ಲಿ ಪದಾಧಿಕಾರಿಗಳಿರುವ ಬ್ಯಾನರ್ ಹಾಕಿಕೊಂಡು ಶುಭ ಕೋರುವುದು ಇವೆಲ್ಲ ತೋರಿಕೆಯ ಮುಖವಾಡ ಹೊತ್ತು ತಿರುಗುತ್ತಿವೆ. ಆದರೆ ಇತ್ತೀಚೆಗೆ ಹುಟ್ಟಿರುವ ಸಾವಿತ್ರಿಬಾಯಿ ಫುಲೆ ಸಂಘವು ಅದನ್ನೆಲ್ಲ ಮೀರಿಸಿ ಸಮಾಜದಲ್ಲಿರುವ ಮಹಿಳೆಯರ ಒಳಿತಿಗಾಗಿ ಸಾಕಷ್ಟು ಶ್ರಮಿಸುತ್ತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾಪರ ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳಾದ ಜಾಥಾ, ಬೀದಿ ನಾಟಕ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು ಅದರಂತೆ ಮಹಿಳಾಪರ ಕಾನೂನುಗಳ ತಿಳುವಳಿಕೆ ನೀಡುವುದು, ಇವುಗಳನ್ನು ಹಮ್ಮಿಕೊಂಡು ಮಹಿಳಾ ಸಬಲೀಕರಣ ಮಾಡುವುದರಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿ ಎಂದು ಆಶಿಸುವೆ………




ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS